ಬದಿಯಡ್ಕ: ಇತಿಹಾಸ ಪ್ರಸಿದ್ಧ ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ (ಫೆ.12) ರಿಂದ 16 ರವರೆಗೆ ವಿವಿಧ ಧಾರ್ಮಿಕ, ತಾಂತ್ರಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು ಬುಧವಾರ ಧ್ವಜಾರೋಹಣದೊಂದಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ತಾಂತ್ರಿಕತ್ವದಲ್ಲಿ ಕಾರ್ಯಕ್ರಮ ಆರಂಬವಾಯಿತು.
ಬುಧವಾರ ಬೆಳಗ್ಗೆ 9.30ಕ್ಕೆ ಧ್ವಜಾರೋಹಣ, ಶ್ರೀಭೂತ ಬಲಿ, ಹಸಿರು ವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಿತು. ರಾತ್ರಿ 7ರಿಂದ ದೀಪೋತ್ಸವ ನಡೆಯಿತು.
ಇಂದು(ಫೆ. 13) ಬೆಳಗ್ಗೆ 9.30ಕ್ಕೆ ಶ್ರೀ ಭೂತಬಲಿ, ರಾತ್ರಿ 7ರಿಂದ ದೀಪೋತ್ಸವ, 14ರಂದು ಬೆಳಗ್ಗೆ 9.30ಕ್ಕೆ ಶ್ರೀಭೂತಬಲಿ, ರಾತ್ರಿ 8ರಿಂದ ನಡುದೀಪೋತ್ಸವ ಜರಗಲಿದೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯರಂಗ ಎಡನೀರು, ಇದರ ವಾರ್ಷಿಕೋತ್ಸವದ ಭಾಗವಾಗಿ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಹರ್ಷ" ಕಾರ್ಯಕ್ರಮ ನಡೆಯುವುದು. 15 ರಂದು ರಾತ್ರಿ 8 ರಿಂದ ಬೆಡಿ ಉತ್ಸವ, 11 ರಿಂದ ಶ್ರೀಮಠದ ಮುಂಭಾಗದಲ್ಲಿ ವಿಶೇಷ ಪುಷ್ಪ ರಥೋತ್ಸವ ನಡೆಯುವುದು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಅವರ ಶಿಷ್ಯರಿಂದ ಭರತನಾಟ್ಯ, ಜಾನಪದ ಮತ್ತು ದೇಶಭಕ್ತಿ ನೃತ್ಯ ವೈವಿಧ್ಯ ಸನಾತನ ನೃತ್ಯಾಂಜಲಿ ನಡೆಯಲಿದೆ. ಫೆ. 16ರಂದು ಬೆಳಗ್ಗೆ 8.30ಕ್ಕೆ ಶಯನೋದ್ಘಾಟನೆ, ಮಂಗಳಾಭಿಷೇಕ ಹಾಗೂ ಸಂಜೆ 5.30ರಿಂದ ಶ್ರೀಮಠದ ಮುಂಭಾಗದಲ್ಲಿ ನೃತ್ಯೋತ್ಸವ, ಮಧುವಾಹಿನಿ ಹೊಳೆಯಲ್ಲಿ ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ, ದ್ವಜಾವರೋಹಣ, ಪ್ರಸಾದ ವಿತರಣೆ, 8.30 ರಿಂದ ತುಳುನಾಡ ಗಾನಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಕ್ತಿಗಾನ ಮೇಳ ಜರಗಲಿದೆ.





