ಡುಮ್ಕಾ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾನೂನು, ಏಕರೂಪ ನಾಗರಿಕ ಸಂಹಿತೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ ವಿರೋಧ ಸೇರಿದಂತೆ ಜಾರ್ಖಂಡ್ನ ಆಡಳಿತರೂಢ ಜೆಎಂಎಂ ಪಕ್ಷ 50 ಅಂಶಗಳ ನಿರ್ಣಯವನ್ನು ಕೈಗೊಂಡಿದೆ.
ಜಾರ್ಖಂಡ್ ಸ್ಪೀಕರ್ ಆಗಿ ಜೆಎಂಎಂ ಶಾಸಕ ರವೀಂದ್ರನಾಥ ಮಹತೋ ಅವಿರೋಧ ಆಯ್ಕೆ
ಡುಮ್ಕಾದ ಗಾಂಧಿ ಮೈದಾನದಲ್ಲಿ ನಡೆದ ಪಕ್ಷದ 46ನೇ ಸಂಸ್ಥಾಪಕ ದಿನಾಚರಣೆ ಸಮಾರಂಭದಲ್ಲಿ ಭಾನುವಾರ ರಾತ್ರಿ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
'ಪೌರತ್ವ ತಿದ್ದುಪಡಿ ಕಾನೂನು, ಏಕರೂಪ ನಾಗರಿಕ ಸಂಹಿತೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ತಿರಸ್ಕರಿಸಬೇಕು' ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ ಛೋಟಾನಾಗಪುರ ಒಕ್ಕಲು ಕಾನೂನು, ಸಂತಾಲ್ ಪ್ರಜ್ಞಾ ಒಕ್ಕಲು ಜಾರಿಗೆ ತರುವುದು ಹಾಗೂ ರಾಜ್ಯಕ್ಕೆ ಬಾಕಿ ಇರುವ ₹ 1.36 ಲಕ್ಷ ಕೋಟಿ ಬಾಕಿಯನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಕೂಡ ನಿರ್ಣಯದಲ್ಲಿದೆ.
ಸೇರಿದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹೇಮಂತ್ ಸೊರೇನ್, 'ಕೇಂದ್ರ ಬಜೆಟ್ನಲ್ಲಿ ರಾಜ್ಯದ ಜನತೆಗೆ ಮೋಸ ಮಾಡಲಾಗಿದೆ. ಜಾರ್ಖಂಡ್ನ ನಿವಾಸಿಗಳು ತಮ್ಮ ಕಾಲಿನ ಮೇಲೆ ನಿಲ್ಲುವುದನ್ನು ಊಳಿಗಮಾನ್ಯ ಮನಸ್ಥಿತಿ ಹೊಂದಿರುವ ಕೆಲವರು ಬಯಸುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಖನಿಜ ಸಂಪನ್ಮೂಲಗಳ ಮೂಲಕ ದೇಶದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡಿದರೂ ಜಾರ್ಖಂಡ್ ಅತ್ಯಂತ ಹಿಂದುಳಿದ ರಾಜ್ಯವಾಗಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಸಮನಾಗಿ ನೋಡಬೇಕು. ನಾವು ಬಹಳಷ್ಟು ಕೊಡುಗೆ ನೀಡುತ್ತೇವೆ. ಆದರೆ ನಾವು ಏನನ್ನೂ ಪಡೆಯುವುದಿಲ್ಲ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಬೇಕಾಗಿದೆ. ಕೇಂದ್ರ ಬಜೆಟ್ನಿಂದ ಶ್ರೀಮಂತರಿಗೆ ಮಾತ್ರ ಲಾಭ. ಆದರೆ ಬಡವರಿಗೆ ಏನೂ ಇಲ್ಲ ಎಂದು ಕಿಡಿ ಕಾರಿದ್ದಾರೆ.




