ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ, ಎಎಪಿ ತೊರೆದಿರುವ ಎಂಟು ಶಾಸಕರು ಶನಿವಾರ ಇಲ್ಲಿ ಬಿಜೆಪಿ ಸೇರಿದರು.
ವಂದನಾ ಗೌರ್ (ಪಾಲಂ), ರೋಹಿತ್ ಮೆಹ್ರಾಲಿಯಾ (ತ್ರಿಲೋಕಪುರಿ), ಗಿರೀಶ್ ಸೋನಿ (ಮದೀಪುರ), ಮದನ್ ಲಾಲ್ (ಕಸ್ತೂರಬಾ ನಗರ), ರಾಜೇಶ್ ರಿಷಿ (ಉತ್ತಮ ನಗರ), ಬಿ.ಎಸ್.
ಜೂನ್ (ಬಿಜ್ವಾಸನ್), ನರೇಶ್ ಯಾದವ್ (ಮೆಹ್ರಾಲಿ) ಮತ್ತು ಪವನ್ ಶರ್ಮಾ (ಆದರ್ಶ ನಗರ) ಬಿಜೆಪಿ ಸೇರಿದ ಎಎಪಿ ಶಾಸಕರು.
ಎಎಪಿಗೆ ರಾಜೀನಾಮೆ ನೀಡಿದ ನಂತರ, ಸದನದ ಸದಸ್ಯತ್ವವನ್ನು ತ್ಯಜಿಸಿ ವಿಧಾನಸಭೆ ಸ್ಪೀಕರ್ಗೆ ರಾಜೀನಾಮೆ ಪತ್ರಗಳನ್ನು ಕಳುಹಿಸಿದ್ದೇವೆ ಎಂದು ಈ ಶಾಸಕರು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ದೆಹಲಿ ಉಸ್ತುವಾರಿ ಬೈಜಯಂತ್ ಪಾಂಡಾ ಮತ್ತು ಪಕ್ಷದ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರ ಸಮ್ಮುಖದಲ್ಲಿ ಶಾಸಕರ ಸೇರ್ಪಡೆ ನಡೆಯಿತು. ಇದೇ ವೇಳೆ, ಎಎಪಿ ಮಾಜಿ ಶಾಸಕ ವಿಜೇಂದರ್ ಗಾರ್ಗ್ ಮತ್ತು ಎಎಪಿಯ ಹಲವು ನಾಯಕರು ಬಿಜೆಪಿ ಸೇರಿದರು.
ಭ್ರಷ್ಟಾಚಾರ ಆರೋಪ ಮತ್ತು ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷವು ಅದರ ಮೂಲ ಸಿದ್ಧಾಂತಕ್ಕೆ ವಿಮುಖವಾಗಿರುವ ಕಾರಣಗಳನ್ನು ಉಲ್ಲೇಖಿಸಿ ಈ ಎಂಟು ಶಾಸಕರು ಶುಕ್ರವಾರ ಎಎಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಎಲ್ಲ ಶಾಸಕರಿಗೆ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಪಕ್ಷವು ಟಿಕೆಟ್ ನಿರಾಕರಿಸಿತ್ತು.
ಶಾಸಕರು ಮತ್ತು ಮುಖಂಡರನ್ನು ಬಿಜೆಪಿಗೆ ಸ್ವಾಗತಿಸಿದ ಪಾಂಡಾ, ಇದು 'ಐತಿಹಾಸಿಕ ದಿನ. ಆಪ್ಡಾ(ವಿಪತ್ತು)ದಿಂದ ಮುಕ್ತಗೊಂಡಿದ್ದಾರೆ. ಚುನಾವಣೆಯ ನಂತರ ದೆಹಲಿ ಕೂಡ ವಿಪತ್ತು ಮುಕ್ತವಾಗಲಿದೆ' ಎಂದು ಹೇಳಿದ್ದಾರೆ.





