ಬದಿಯಡ್ಕ: ಬದುಕಲ್ಲಿ ಸತ್ಪಲದ ಸವಿಯುಣ್ಣಲು ಜೀವನ ವೃಕ್ಷದ ಬೇರು ಸನಾತನ ಧರ್ಮ ವೃಕ್ಷದ ವಿಶಾಲ ತಳಹದಿಯಲ್ಲಿ ಬೆಳೆಯಬೇಕು. ಸರ್ವವ್ಯಾಪಿ ಭಗವಂತನ ಅನುಭವ ವೇದ್ಯವಾಗುವಲ್ಲಿ ದೇವಾಲಯಗಳ ಪಾತ್ರ ಮಹತ್ತರವಾದುದು. ಭಕ್ತಿಯ ಪರಾಕಾಷ್ಠೆಯನ್ನು ಸಾಧಿಸಿದಾಗ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯೀ ಅವರು ತಿಳಿಸಿದರು.
ನೀಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾಂಸ್ಕøತಿಕ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆದ ‘ಮಾತೃ ಸಂಗಮ’ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು,
ಸೇವೆ ಮತ್ತು ಸಮರ್ಪಣೆ ನಾರಿಯ ಮೂಲಶಕ್ತಿಯಾಗಿದೆ. ಕುಟುಂಬ ಮತ್ತು ಸಮಾಜವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸ್ತ್ರೀತ್ವದ ಧೀಶಕ್ತಿ ಮಹತ್ತರವಾದುದಾಗಿದೆ. ಜಗನ್ಮಾತೆಯ ಅಂಶವೆಂದೇ ನಂಬಿರುವ ನಮ್ಮ ಸಂಸ್ಕøತಿಯಲ್ಲಿ ಸ್ತ್ರೀ ಪೂಜ್ಯಳೂ, ನಿರ್ಮಾತೃಗಳೂ ಆಗಿರುವುದರ ಜೊತೆಗೆ ಯುವ ಸಮಾಜವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಪರಂಪರೆಯನ್ನು ಉಳಿಸುವಲ್ಲಿ ಮಾತೃಶಕ್ತಿ ಜಾಗೃತವಾಗಿದೆ ಎಂದವರು ಆಶೀರ್ವಚನದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಮಾತೃಸಂದೇಶ ನೀಡಿದ ಶ್ರೀರಾಮಚಂದ್ರಾಪುರ ಮಠದ ಮಾತೃತ್ವಂ ಯೋಜನೆಯ ಈಶ್ವರಿ ಬೇರ್ಕಡವು ಅವರು ಮಾತನಾಡಿ, ವರ್ತಮಾನದ ಪ್ರಪಂಚ-ಸಮಾಜ ವ್ಯವಸ್ಥೆ ಒಂದಷ್ಟು ಪ್ರತ್ಯೇಕ ಹಾದಿ ಹಿಡಿದಂತಿದೆ. ನಡೆ-ನುಡಿ, ವಸ್ತ್ರ-ಆಭರಣಗಳೇ ಮೊದಲಾದ ವಿಷಯಗಳು ಬದಲಾಗುತ್ತಿದೆ. ದಡಮೀರಿ ಸಂಚರಿಸುವ ವ್ಯವಸ್ಥೆಗಳನ್ನು ಮತ್ತೆ ಪರಂಪರೆಯತ್ತ ಕರೆತರುವಲ್ಲಿ ಯುವ ಸಮೂಹಕ್ಕೆ ಮತ್ತೆ ಮಾತೃಶಕ್ತಿ ದಾರಿ ತೋರಿಸಬೇಕಿದೆ ಎಂದರು. ಸಂಸ್ಕಾರ, ಸಂಸ್ಕøತಿಯನ್ನು ಮಕ್ಕಳಿಗೆ ಕಲಿಸುವಲ್ಲಿ ದೇಶೀಯತೆಯ ಲೇಪಗಳೊಂದಿಗೆ ಮಾತೆಯರು ನವ ಸಮಾಜದ ಚುಕ್ಕಾಣಿ ಹಿಡಿಯಬೇಕು ಎಂದರು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ, ಸಂಶೋಧಕಿ ಡಾ.ಯು.ಮಹೇಶ್ವರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತಿಯೊಂದಿಗೆ ಅಂತರಂಗದ ಅನುಸಂಧಾನ ಇಂದು ಅಗತ್ಯವಿದೆ. ವೈಯುಕ್ತಿಕ ವಿಕಾಸಕ್ಕೆ, ಮನಃಕ್ಷೋಭೆಯ ನಿವಾರಣೆಗೆ ಬೆಂಬಲ ಅಗತ್ಯ ಎಂದರು.
ಹಿರಿಯ ಪ್ರಸೂತಿ ತಜ್ಞೆ ಡಾ.ಪದ್ಮಾವತಿ ಕೊಲ್ಲಂಪಾರೆ, ಬ್ಲಾ.ಪಂ.ಸದಸ್ಯೆ ಅಶ್ವಿನಿ ಮೊಳೆಯಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಜಯಲಕ್ಷ್ಮೀ ಟೀಚರ್ ಮಾನ್ಯ, ಶಾಂತಾ ಕುಂಟಿನಿ, ಶಶಿ ಸದಾನಂದ ಶೆಟ್ಟಿ ಕಾರ್ಮಾರು, ಜಯಂತಿ ಚಕ್ರೇರ್ಶವರ ಮಲ್ಲಡ್ಕ, ಆಶಾ ಕಿರಣ ಟೀಚರ್ ಮುಂಡೋಡು, ಸುಧಾದೇವಿ ಟೀಚರ್ ಕಾರ್ಮಾರು, ಸರಸ್ವತಿ ನಾಯ್ಕ್ ಕಾರ್ಮಾರು, ರಂಜಿತಾ ನವೀನ್ ಕಾರ್ಮಾರು, ಜ್ಯೋತಿ ಕಾರ್ಮಾರು ಉಪಸ್ಥಿತರಿದ್ದರು. ಮಾತೃ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಮೋಹನ ಸ್ವಾಗತಿಸಿ, ಮಹಿಳಾ ವೃಂದದ ಅಧ್ಯಕ್ಷೆ ಜ್ಯೋತಿ ಕಾರ್ಮಾರು ವಂದಿಸಿದರು. ಶಿಕ್ಷಕಿ ಶಾಲಿನಿ ಮಹೇಶ್ ವಳಕ್ಕುಂಜ ಹಾಗೂ ಧನ್ಯಶ್ರೀ ಸರಳಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಾರ್ಮಾರು ಶ್ರೀಮಹಾವಿಷ್ಣು ಮಹಿಳಾ ಭಜನಾ ತಂಡದವರಿಂದ ಕುಣಿತ ಭಜನೆ ಹಾಗೂ ಮಂಜೇಶ್ವರದ ನಾಟ್ಯನಿಲಯಂನ ವಿದ್ವಾನ್.ಬಾಲಕೃಷ್ಣ ಮಾಸ್ತರ್ ಅವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.





