ನವದೆಹಲಿ: 'ಭಾರತದಲ್ಲಿ ಈ ವರ್ಷ ರಕ್ಷಣಾ ಕ್ಷೇತ್ರದ ಉತ್ಪಾದನೆ ₹1.60 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ. 2029ರವರೆಗೆ ₹3 ಲಕ್ಷ ಕೋಟಿ ಮೊತ್ತದ ಸೇನಾ ಪರಿಕರ ಉತ್ಪಾದನೆ ಗುರಿ ನಿಗದಿಸಲಾಗಿದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಆಮದು ಮೇಲಿನ ಅವಲಂಬನೆಯನ್ನು ತಗ್ಗಿಸಲಾಗುವುದು.
ದೇಶದ ಅಗತ್ಯ ಈಡೇರಿಕೆ ಜೊತೆಗೆ ರಫ್ತು ಅವಕಾಶವನ್ನು ಬಲಪಡಿಸುವಂತೆ ರಕ್ಷಣಾ ಕೈಗಾರಿಕಾ ಕ್ಷೇತ್ರವನ್ನು ರೂಪಿಸಲಾಗುವುದು ಎಂದು ಸಚಿವರು ಗುರುವಾರ ಹೇಳಿದರು.
'ರಕ್ಷಣಾ ಸಮಾವೇಶ -ಭವಿಷ್ಯದ ಬಲ' ವಿಷಯವನ್ನು ಕುರಿತು 'ದ ವೀಕ್' ನಿಯತಕಾಲಿಕೆಯು ಇಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರದ ಭದ್ರತೆ, ಕಾರ್ಯತಂತ್ರ ಸ್ವಾಯತ್ತತೆಗೆ ಪೂರಕವಾಗಿ ರಕ್ಷಣಾ ಉತ್ಪಾದನೆಯ ಸಾಮರ್ಥ್ಯ ರೂಪಿಸುವ ಗುರಿ ಇದೆ. ರಕ್ಷಣಾ ಕ್ಷೇತ್ರದಲ್ಲಿ ನಮ್ಮ ರಫ್ತು ವಹಿವಾಟು ಈ ವರ್ಷ ₹30 ಸಾವಿರ ಕೋಟಿಗೆ ಹಾಗೂ 2029ರ ವೇಳೆಗೆ ₹50 ಸಾವಿರ ಕೋಟಿಗೆ ಮುಟ್ಟಬೇಕು ಎಂದರು.
ಭಾರತವು ತನ್ನ ಗಡಿಯ ರಕ್ಷಣೆ ಜೊತೆಗೆ ಅಂತರರಾಷ್ಟ್ರೀಯ ಗಡಿ ರಕ್ಷಣಾ ವ್ಯವಸ್ಥೆಯಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಭಾರತ, ರಕ್ಷಣಾ ಅಗತ್ಯಗಳಿಗೆ ಆಮದು ಮಾಡಿಕೊಳ್ಳಲಿದೆ ಎಂಬ ಮನಃಸ್ಥಿತಿ ಬದಲಿಸುವುದೇ ಮೊದಲ ಮತ್ತು ಪ್ರಮುಖ ಸವಾಲಾಗಿದೆ ಎಂದರು.





