HEALTH TIPS

ಭಾರತದ ತಾಯಿ, ಪಾಕ್ ತಂದೆಗೆ ಜನಿಸಿದ ಮಕ್ಕಳ ಗಡೀಪಾರು: ಅಧಿಕಾರಿಗಳಿಗೆ ತಲೆಬಿಸಿ

ಭೋಪಾಲ್: ಏಪ್ರಿಲ್ 22ರ ಪಹಲ್ಗಾಮ್ ದಾಳಿ ಬಳಿಕ ಭಾರತಕ್ಕೆ ಬಂದಿರುವ ಪಾಕಿಸ್ತಾನಿಗಳನ್ನು ಹಿಂದಿರುಗುವಂತೆ ಕೇಂದ್ರ ಸರ್ಕಾರ ಕಠಿಣ ಆದೇಶ ಹೊರಡಿಸಿದೆ. ಈ ಮಧ್ಯೆ, ಭಾರತೀಯ ತಾಯಂದಿರು ಮತ್ತು ಪಾಕಿಸ್ತಾನದ ತಂದೆಯಂದಿರಿಗೆ ಜನಿಸಿದ ರಾಜ್ಯದ ಒಂಬತ್ತು ಮಕ್ಕಳ ಗಡೀಪಾರು ನಿರ್ಣಯದ ಬಗ್ಗೆ ಮಧ್ಯಪ್ರದೇಶದ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಆದೇಶಕ್ಕೆ ಸ್ವಲ್ಪ ಮೊದಲು ಏಪ್ರಿಲ್ 25ರಂದು ಭೋಪಾಲ್‌ನಲ್ಲಿ ದೀರ್ಘಾವಧಿಯ ವೀಸಾಗೆ (ಎಲ್‌ಟಿವಿ) ಅರ್ಜಿ ಸಲ್ಲಿಸಿರುವ ಪಾಕಿಸ್ತಾನಿ ವ್ಯಕ್ತಿಯ ಪ್ರಕರಣದಲ್ಲಿಯೂ ಅವರು ಪರಿಹಾರವನ್ನು ಹುಡುಕುತ್ತಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಭಾರತೀಯ ತಾಯಂದಿರು ಮತ್ತು ಪಾಕಿಸ್ತಾನಿ ತಂದೆಯಂದಿರಿಗೆ ಜನಿಸಿದ ಒಂಬತ್ತು ಮಕ್ಕಳ ಬಗ್ಗೆ ನಾವು ಕೇಂದ್ರದಿಂದ ಸಲಹೆ ಕೇಳಿದ್ದೇವೆ. ನಾಲ್ಕು ಮಕ್ಕಳು ಇಂದೋರ್‌ನಲ್ಲಿ, ಮೂವರು ಜಬಲ್ಪುರದಲ್ಲಿ ಮತ್ತು ಎರಡು ಮಕ್ಕಳು ಭೋಪಾಲ್‌ನಲ್ಲಿ ತಮ್ಮ ತಾಯಂದಿರ ಬಳಿ ಇದ್ದಾರೆ. ಏಪ್ರಿಲ್ 25ರಂದು ಎಲ್‌ಟಿವಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯ ಬಗ್ಗೆಯೂ ನಾವು ಸಲಹೆ ಕೇಳಿದ್ದೇವೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಉನ್ನತ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಈ ಒಂಬತ್ತು ಮಕ್ಕಳು ಸೇರಿದಂತೆ ಮಧ್ಯಪ್ರದೇಶದ ಕನಿಷ್ಠ 14 ಜನರು ದೇಶ ತೊರೆಯಬೇಕಿತ್ತು ಎಂದು ಅವರು ಹೇಳಿದ್ದಾರೆ.

ಆ ಪೈಕಿ ಮೂವರು ಈಗಾಗಲೇ ಪಾಕಿಸ್ತಾನಕ್ಕೆ ತೆರಳಿದ್ದು, ಒಬ್ಬ ವ್ಯಕ್ತಿ ಸ್ವಕಾರಣಾಂತರಗಳಿಂದ ದೆಹಲಿಯಲ್ಲಿದ್ದಾರೆ. ಅವರ ಬಗ್ಗೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ ಪರಿಶೀಲನೆ ನಡೆಸುತ್ತಿದೆ ಎಂದಿದ್ದಾರೆ.

ಮತ್ತೊಬ್ಬ ಅಧಿಕಾರಿ ಪ್ರಕಾರ, 228 ಮಂದಿ ಪಾಕಿಸ್ತಾನಿ ಪ್ರಜೆಗಳು ವಿಭಿನ್ನ ವೀಸಾಗಳಡಿ ಮಧ್ಯಪ್ರದೇಶದಲ್ಲಿ ನೆಲೆಸಿದ್ದಾರೆ.

ಗಡುವಿನೊಳಗೆ ದೇಶ ಬಿಟ್ಟು ತೆರಳಲು ವಿಫಲವಾಗುವ ಪಾಕಿಸ್ತಾನಿಗಳನ್ನು ವಿಚಾರಣೆಗೆ ಒಳಪಡಿಸಿ, ಮೂರು ವರ್ಷ ಜೈಲು ಮತ್ತು ಗರಿಷ್ಠ ₹3 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಸೋಮವಾರ ಕೇಂದ್ರ ಸರ್ಕಾರ ತಿಳಿಸಿದೆ.

26 ಜನರ ಸಾವಿಗೆ ಕಾರಣವಾದ ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ 25ರಂದು ಪಾಕಿಸ್ತಾನಿಗಳೇ ದೇಶ ಬಿಟ್ಟು ತೊಲಗಿ ಎಂಬ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿತ್ತು.

ಅಂದೇ ಉದ್ಯಮ, ಕಾನ್ಫರೆನ್ಸ್, ಭೇಟಿ ಮತ್ತು ಯಾತ್ರೆಯ ವೀಸಾಗಳು ಸೇರಿದಂತೆ 14 ವೀಸಾಗಳನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿತ್ತು.

ದೀರ್ಘಾವಧಿ ಮತ್ತು ರಾಜತಾಂತ್ರಿಕ ವೀಸಾಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ತಿಳಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries