ಮಂಜೇಶ್ವರ: ಮಂಜೇಶ್ವರ ಮಜಿಬೈಲಿನ ಶ್ರೀ ವಿಷ್ಣು ಯಕ್ಷಬಳಗ ಕಲಾ ತಂಡದ ಯಕ್ಷ ಶತಕ ಕಾರ್ಯಕ್ರಮವು ಮೇ 25 ರಂದು ಭಾನುವಾರ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶಾಸ್ತ್ರೀಯ ಸಂಗೀತ, ತಾಳಮದ್ದಳೆ, ಬಯಲಾಟ ಸನ್ಮಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ, ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು, ಶ್ರೀ ಬೆನಕ ಯಕ್ಷ ಕಲಾ ವೇದಿಕೆ ಪೈವಳಿಕೆ ಸಮಾರಂಭಕ್ಕೆ ಸಹಕಾರ ನೀಡಲಿದೆ.
ವಿಷ್ಣು ಯಕ್ಷಬಳಗ ತಂಡವು ಯಶಸ್ವಿಯಾಗಿ ನೂರು ತಾಳಮದ್ಧಳೆಯನ್ನು ಪ್ರಸ್ತುತಿಗೊಳಿಸಿದ ಸಂಭ್ರಮದಲ್ಲಿ ಯಕ್ಷಶತಕ ಆಯೋಜಿಸಲಾಗಿದೆ.
ಬೆಳಿಗ್ಗೆ 10 ರಿಂದ ಯಕ್ಷಶತಕ ಉದ್ಘಾಟನೆ 'ಅಬ್ಬರ ತಾಳ' ಜರಗಲಿದ್ದು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಜಿಬೈಲು ಕ್ಷೇತ್ರದ ಮೊಕ್ತೇಸರ ಗೋಪಾಲಕೃಷ್ಣ ನಾವಡ ಮಜಿಬೈಲು ದೀಪ ಪ್ರಜ್ವಲನೆ ಗೈಯಲಿದ್ದಾರೆ. ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಅಧ್ಯಕ್ಷ ಗಣೇಶ ನಾವಡ ಮೀಯಪದವು, ಉಪಸ್ಥಿತರಿರುವರು.
10.30ರಿಂದ ಶಾಸ್ತ್ರೀಯ ಸಂಗೀತ ವಿದುಷಿ ಶಿಲ್ಪಾ ಭಟ್ ಮತ್ತು ಶಿಷ್ಯೆಯರಾದ ಮಮತಾ ನಾವಡ, ಹಾಗೂ ಕುಮಾರಿ ವಿಷ್ಣು ಪ್ರಿಯ ನಾವಡ ಅವರಿಂದ. 11.30ಕ್ಕೆ ಗೌರವಾರ್ಪಣೆ ಸಂಗೀತ ಗುರುಗಳಾದ ವಿದುಷಿ, ಶಿಲ್ಪಾ ಭಟ್, ಯಕ್ಷಗಾನ ಹಿಮ್ಮೇಳ ಗುರುಗಳಾದ ಶೇಣಿ ಸುಬ್ರಹ್ಮಣ್ಯ ಭಟ್ ಉಳುವಾನ ಅವರಿಗೆ ನಡೆಯಲಿದೆ. 11.45 ರಿಂದ ತಾಳಮದ್ದಳೆ ವಾಮನ ಚರಿತ್ರೆ, ಅಪರಾಹ್ನ 2.30ರಿಂದ ಯಕ್ಷಗಾನ ಬಯಲಾಟ ವೀರ ತರಣಿಸೇನ ಜರಗಲಿದೆ.
ಸಂಜೆ 5.30 ರಿಂದ ಹಿರಿಯ ಧಾರ್ಮಿಕ ನೇತಾರ ಹಾಗೂ ಅರಸುಸಂಕಲ ದೈವಕ್ಷೇತ್ರ ಸಂತಡ್ಕ ಮಾಡ ಕ್ಷೇತ್ರದ ಅಧ್ಯಕ್ಷ ಡಾ. ಶ್ರೀಧರ ಭಟ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು ಮುಖ್ಯ ಅತಿಥಿಗಳಾಗಿ ನೇಪಾಳ ಪಶುಪತಿ ದೇವಸ್ಥಾನದ ನಿವೃತ್ತ ಅರ್ಚಕ ರಘುರಾಮ ಕಾರಂತ ಪದ್ಯಾಣ, ಕ.ಸಾ.ಪ. ಕಾಸರಗೋಡು ಜಿಲ್ಲಾ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ವಾಸ್ತು ತಜ್ಞ ಜ್ಯೋತಿಷಿ ಎಂ. ಛತ್ರಪತಿ ಶಿವಾಜಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಭಾಗವಹಿಸುವರು. ಹವ್ಯಾಸಿ ಯಕ್ಷಗಾನ ಕಲಾವಿದ ಮಾಧವ ನಾವಡ ವರ್ಕಾಡಿ, ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ನಾಯಕ್ ಸೂರಂಬೈಲು ಅವರಿಗೆ ಸನ್ಮಾನ ಜರಗಲಿದೆ. ಬಳಿಕ ಯಕ್ಷಗಾನ ಬಯಲಾಟ 'ವೀರವರ್ಮ ಕಾಳಗ' ಜರಗಲಿದೆ.



