ನವದೆಹಲಿ: ಬಿಜೆಪಿ ಪ್ರತಿಪಾದಿಸುವ ಚಿಂತನೆಗಳನ್ನು ಹಿಂದೂ ಚಿಂತನೆಗಳೆಂದು ನಾನು ಪರಿಗಣಿಸುವುದಿಲ್ಲ. ಬಿಜೆಪಿಗರು ಅಧಿಕಾರದ ಚುಕ್ಕಾಣಿ ಹಿಡಿದಿರಬಹುದು. ಆದರೆ ಭಾರತೀಯ ಚಿಂತಕರನ್ನು ಅವರು ಎಂದಿಗೂ ಪ್ರತಿನಿಧಿಸಲಾರರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಜತೆಗೆ 'ಬುದ್ಧ ಗುರುನಾನಕ್ ಬಸವಣ್ಣ ಗಾಂಧಿ ಅಂಬೇಡ್ಕರ್ ಹಾಗೂ ಪೌರಾಣಿಕ ವ್ಯಕ್ತಿ ರಾಮ ಇವರು ಯಾರೂ ಮತಾಂಧರಾಗಿರಲಿಲ್ಲ. ಇವರು ಯಾರೂ ನಾವು ಜನರನ್ನು ಕೊಲ್ಲುತ್ತೇವೆ ಎಂದವರಲ್ಲ. ಬದಲಿಗೆ ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದರು. ಇದೇ ಭಾರತದ ಇತಿಹಾಸ ಹಾಗೂ ತಳಹದಿ' ಎಂದಿದ್ದಾರೆ.
ಬಿಜೆಪಿ ಆಕ್ಷೇಪ:
ರಾಮನನ್ನು ಪೌರಾಣಿಕ ವ್ಯಕ್ತಿ ಎಂದಿದ್ದಕ್ಕೆ ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಆಕ್ಷೇಪಿಸಿದ್ದಾರೆ. ರಾಮ ಬರೀ ಪೌರಾಣಿಕ ವ್ಯಕ್ತಿಯಲ್ಲ. ಭಾರತದ ಮೌಲ್ಯ ಸಂಪ್ರದಾಯ ಆಧ್ಯಾತ್ಮದ ಸಾರ. ರಾಮ ಭಾರತದ ಉಸಿರು. ರಾಹುಲ್ ಗಾಂಧಿ ರೀತಿಯ ವ್ಯಕ್ತಿಗಳು ರಾಜಕೀಯ ಪಕ್ಷಗಳು ಬರುತ್ತವೆ ಹೋಗುತ್ತವೆ. ಆದರೆ ಭಗವಾನ್ ರಾಮ ಧರ್ಮದ ಪ್ರತೀಕವಾಗಿ ಸದಾ ಉಳಿದಿರುತ್ತಾರೆ ಎಂದು ಮಾಳವೀಯ ಹೇಳಿದ್ದಾರೆ.




