ದರ್ಭಂಗಾ/ಪಟ್ನಾ: ಬಿಹಾರದ ದರ್ಭಂಗಾದಲ್ಲಿರುವ ಅಂಬೇಡ್ಕರ್ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ತಡೆದಿದ್ದಾರೆ.
ರಾಹುಲ್ ಗಾಂಧಿ ಅವರು 'ಶಿಕ್ಷಾ ನ್ಯಾಯ ಸಂವಾದ' ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬೇಕಿತ್ತು.
ಆದರೆ, ರಾಹುಲ್ ಮತ್ತು ಅವರ ಬೆಂಗಾವಲು ಪಡೆ ಹಾಸ್ಟೆಲ್ ಆವರಣ ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ.
ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಸಂವಾದ ಕಾರ್ಯಕ್ರಮ ನಡೆಸಲು ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಾಯಕರು ಆಯ್ಕೆ ಮಾಡಿದ ಸ್ಥಳದಲ್ಲೇ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಅವರು ಸಂವಾದ ನಡೆಸಲಿದ್ದಾರೆ. ಬದಲಾಗಿ ಸ್ಥಳೀಯ ಆಡಳಿತವು ಸೂಚಿಸಿದ ಸ್ಥಳದಲ್ಲಿ ಅಲ್ಲ ಎಂದು ಬಿಹಾರ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ದರ್ಭಂಗಾದಲ್ಲಿನ ಸ್ಥಳೀಯ ಆಡಳಿತವು ಜೆಡಿ(ಯು)-ಬಿಜೆಪಿ ಸರ್ಕಾರದ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿದೆ. ಪಕ್ಕದ ಜಿಲ್ಲೆಗಳಾದ ಮಧುಬನಿ ಮತ್ತು ಸಮಷ್ಟಿಪುರದಿಂದ ಬರುವ ನೂರಾರು ವಿದ್ಯಾರ್ಥಿಗಳನ್ನು ದರ್ಭಂಗಾ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಭಯ್ ದುಬೆ ಆರೋಪಿಸಿದ್ದಾರೆ.






