ಕುಂಬಳೆ: ರಾ.ಹೆದ್ದಾರಿಯಲ್ಲಿ ಕಾಸರಗೋಡಿನಿಂದ ತಲಪಾಡಿ-ಮಂಗಳೂರು ಭಾಗಕ್ಕೆ ತೆರಳುವ ಬಸ್ ಗಳು ಗುರುವಾರದಿಂದ ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಇಳಿಸಿ ತೆರಳುತ್ತಿರುವುದು ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ.
ಕಾಸರಗೋಡು ಭಾಗದಿಂದ ತಲಪಾಡಿ-ಮಂಗಳೂರು ಭಾಗಕ್ಕೆ ತೆರಳುವ ಬಸ್ಸ್ಗಳು ಕುಂಬಳೆ ದೇವೀನಗರ ಸರ್ವೀಸ್ ರಸ್ತೆ ಮೂಲಕ ಅಂಡರ್ ಪ್ಯಾಸೇಜಿನಲ್ಲಾಗಿ ಕುಂಬಳೆ ಬಸ್ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರನ್ನು ಇಳಿಸಿ ತೆರಳಬೇಕೆಂದು ಅಧಿಕಾರಿಗಳು ತಿಳಿಸಿದ್ದರೂ ಬಸ್ ಗಳು ಅದನ್ನು ಗುರುವಾರದಿಂದ ಪಾಲಿಸುತ್ತಿಲ್ಲವೆಂಬ ಹಠಕ್ಕೆ ಜೋತುಬಿದ್ದಾರೆ. ಅಂಡರ್ ಪೇಸೇಜ್ ಮೂಲಕ ಕುಂಬಳೆ ಪೇಟೆಗೆ ತೆರಳುವುದು ವಿರುದ್ದ ದಿಶೆಯಲ್ಲಾದುದರಿಂದ ಎದುರಿನಿಂದ ಬರುವ ವಾಹನಗಳನ್ನು ತಪ್ಪಿಸಲು ಸಮಸ್ಯೆ ಎದುರಾಗಿದೆ.
ಈ ಕಾರಣದಿಂದ ಗುರುವಾರ ಕಾಸರಗೋಡಿನಿಂದ ತಲಪಾಡಿ-ಮಂಗಳೂರು ಭಾಗಕ್ಕೆ ತೆರಳುವ ಯಾವುದೇ ಬಸ್ ಗಳು ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ನೇರವಾಗಿ ಹೆದ್ದಾರಿ ಮೂಲಕವೇ ಸಂಚರಿಸುತ್ತಿರುವುದು ಕಂಡುಬಂತು. ಇದರಿಂದ ಕುಂಬಳೆಯಲ್ಲಿ ಇಳಿಯಬೇಕಾದ ಪ್ರಯಾಣಿಕರು ರಾ.ಹೆದ್ದಾರಿಯಲ್ಲಿ ಇಳಿದು ರಸ್ತೆ ದಾಟಬೇಕಾಗುತ್ತಿದೆ. ಇದು ಮಹಿಳೆಯರು, ವಿದ್ಯಾರ್ಥಿಗಳಿಗೆ ಭಾರೀ ಅಪಾಯದ ಭೀತಿಗೆ ಕಾರಣವಾಗಿದೆ.
ಇದೇ ವೇಳೆ, ತಲಪಾಡಿ ಕಡೆಯಿಂದ ಆಗಮಿಸುವ ಬಸ್ ಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಕುಂಬಳೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿವೆ. ಕಾಸರಗೋಡು ಭಾಗದಿಂದ ಬರುವ ಬಸ್ ಗಳನ್ನು ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸಲು ಅಗತ್ಯದ ವ್ಯವಸ್ಥೆ ಕಲ್ಪಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಭಿಮತ:
-ರಾ.ಹೆದ್ದಾರಿಯ ಸಮರ್ಪಕ ವ್ಯವಸ್ಥೆಗೆ ಕುಂಬಳೆಯ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮತ್ತು ಕುಂಬಳೆ ಗ್ರಾ.ಪಂ.ಎಸಗಿದ ಲೋಪಗಳಿಂದ ಇಂದಿನ ಪರಿಸ್ಥಿತಿ ಎದುರಾಗಿದೆ. ಆರಂಭದಲ್ಲಿ ಜನರ ಕಣ್ಣಿಗೆ ಮಣ್ಣೆರಚಲು ಪ್ರತಿಭಟನೆ ನಡೆಸಿ ತಿರುವನಂತಪುರದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ಮನವಿಯ ಬೆನ್ನು ಬೀಳದೆ ವ್ಯರ್ಥ ಕಾಲಕ್ಷಯಗೈದುದರ ಪರಿಣಾಮ ಇಂದು ಬಸ್ ಗಳು ನಿಲ್ದಾಣ ಪ್ರವೇಶಿಸದ ಪರಿಸ್ಥಿತಿ ಎದುರಾಗಿದೆ. ರಾಜಕೀಯ ಹಿತಾಸಕ್ತಿಯಿಂದ ಮುಕ್ತರಾಗಿ ಸ್ಥಳೀಯ ಗ್ರಾ.ಪಂ., ವ್ಯಾಪಾರಿ ಸಂಘಟನೆ, ಶಾಸಕ, ಸಂಸದರು ಈ ಹಿಂದೆಯೇ ಕ್ರಮ ಕೈಗೊಳ್ಳುತ್ತಿದ್ದರೆ ಸಮಸ್ಯೆ ತಲೆದೋರುತ್ತಿರಲಿಲ್ಲ. ಯೋಜನೆಯ ಆರಂಭದಲ್ಲಿ ಇವರೆಲ್ಲ ನಿರಾಸಕ್ತರಾದುದರ ಫಲ ಇಂದು ಅನುಭವಿಸಬೇಕಾಗಿದೆ. ಸಂಬಂಧಪಟ್ಟವರು ಪರಿಹಾರ ಇನ್ನಾದರೂ ಕಲ್ಪಿಸಬೇಕು.
-ವಿಕ್ರಂ ಪೈ. ಕುಂಬಳೆ.
ಹಿರಿಯ ವ್ಯಾಪಾರಿಗಳು., ಸಮಾಜ ಸೇವಕ.



