ಜೈಪುರ: ”ಭಾರತಕ್ಕೆ ಯಾರೊಂದಿಗೂ ದ್ವೇಷವಿಲ್ಲ.ಆದರೆ, ಯಾರಾದರೂ ಏನನ್ನಾದರೂ ಮಾಡಲು ಧೈರ್ಯ ಮಾಡಿದರೆ, ಭಾರತವು ಸೂಕ್ತ ಉತ್ತರ ನೀಡುವಲ್ಲಿ ಹಿಂದೆ ಸರಿಯುವುದಿಲ್ಲ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಮುಖ್ಯಸ್ಥ ಮೋಹನ್ ಭಾಗವತ್ ಆಪರೇಷನ್ ಸಿಂದೂರ್ ಕುರಿತು ಪಾಕಿಸ್ತಾನವನ್ನು ಹೆಸರಿಸದೆಯೇ ಶನಿವಾರ (ಮೇ 17) ಹೇಳಿಕೆ ನೀಡಿದ್ದಾರೆ.
ಜೈಪುರದ ಸಿಕಾರ್ ರಸ್ತೆಯಲ್ಲಿರುವ ಸಂತ ರವಿರಾಮ್ ಆಶ್ರಮದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್ “ಭಾರತವು ತನ್ನ ನೆರೆಯ ರಾಷ್ಟ್ರಗಳಿಗೆ ಯಾವಾಗಲೂ ಅಣ್ಣನ ಪಾತ್ರವನ್ನು ವಹಿಸಿದೆ ಮತ್ತು ಯಾವಾಗಲೂ ತನ್ನ ನೆರೆಯ ರಾಷ್ಟ್ರಗಳಿಗೆ ಸಹಾಯ ಮಾಡಿದೆ. ಇದರ ಹೊರತಾಗಿಯೂ, ಭಾರತವು ಎಂದಿಗೂ ಅಣ್ಣನೆಂದು ಹೆಮ್ಮೆಪಡುವುದಿಲ್ಲ ಮತ್ತು ಅಣ್ಣನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವಾಗ, ಕಿರಿಯರಿಗೆ ಸಲಹೆ ನೀಡುತ್ತದೆ” ಎಂದರು.
ಭಾರತವು ಯಾವಾಗಲೂ ಮಾನವ ಆಧಾರಿತ ಧರ್ಮವನ್ನು ಅನುಸರಿಸುತ್ತಿರುವುದರಿಂದ, ಇಡೀ ಜಗತ್ತಿಗೆ ಮಾನವ ಧರ್ಮವನ್ನು ಕಲಿಸುವುದು ಭಾರತದ ಕರ್ತವ್ಯ. ಆದರೆ ಇದಕ್ಕೆ ಶಕ್ತಿ ಬೇಕು" ಎಂದರು.
“ನೀವು ಶಕ್ತಿಶಾಲಿ ಎಂದು ಭಾವಿಸಿದಾಗ ಮಾತ್ರ ಜಗತ್ತು ನಿಮ್ಮ ಮಾತನ್ನು ಕೇಳುತ್ತದೆ. ಇದು ಪ್ರಪಂಚದ ಸ್ವಭಾವ ಮತ್ತು ಈ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ, ಲೋಕಕಲ್ಯಾಣಕ್ಕಾಗಿ ನಾವು ಶಕ್ತಿಶಾಲಿಗಳಾಗಿರಬೇಕು ಮತ್ತು ಕಾಲಕಾಲಕ್ಕೆ ಜಗತ್ತು ನಮ್ಮ ಶಕ್ತಿಯನ್ನು ನೋಡುತ್ತಿದೆ ಮತ್ತು ನಮ್ಮಿಂದ ಪ್ರಭಾವಿತವಾಗುತ್ತಿದೆ.” ಎಂದರು.
“ಅನೇಕ ನೆರೆಹೊರೆಯವರು ಕಾಲಕಾಲಕ್ಕೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಾರೆ. ನಮ್ಮ ಹೃದಯದಲ್ಲಿ ಯಾವಾಗಲೂ ಸಹಕಾರದ ಭಾವನೆ ಇರುವುದರಿಂದ ನಾವು ಇನ್ನೂ ಸಹಾಯ ಮಾಡುತ್ತೇವೆ, ಆದರೆ ಕೆಲವೊಮ್ಮೆ ಶಕ್ತಿಯ ಪ್ರದರ್ಶನವೂ ಅಗತ್ಯವಾಗುತ್ತದೆ ಮತ್ತು ಇಡೀ ಜಗತ್ತು ಆ ಪ್ರದರ್ಶನವನ್ನು ನೋಡುತ್ತದೆ” ಎಂದು ಹೇಳಿದರು.




