ಅಹಮದಾಬಾದ್: ಗುಜರಾತ್ನ ಪ್ರಮುಖ ದಿನಪತ್ರಿಕೆ 'ಗುಜರಾತ್ ಸಮಾಚಾರ್'ನ ಮಾಲೀಕರಲ್ಲಿ ಒಬ್ಬರಾದ ಬಾಹುಬಲಿ ಶಾ ಅವರನ್ನು ವಂಚನೆ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
'ಹೌದು, ಬಾಹುಬಲಿ ಶಾ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ.
ಆರೋಪದ ವಿವರಗಳನ್ನು ಇ.ಡಿ ಅಧಿಕಾರಿಗಳು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ, ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶ್ರೇಯಂಶ್ ಶಾ ತಿಳಿಸಿದ್ದಾರೆ.
1932ರಲ್ಲಿ 'ಗುಜರಾತ್ ಸಮಾಚಾರ್' ದಿನಪತ್ರಿಕೆಯನ್ನು ಆರಂಭಿಸಲಾಯಿತು. ಇದು ಅತಿ ಹೆಚ್ಚು ಪ್ರಸರಣವಾಗುತ್ತಿರುವ ಸ್ಥಳೀಯ ಭಾಷೆಯ ಪತ್ರಿಕೆಗಳಲ್ಲಿ ಒಂದಾಗಿದೆ. ಈ ಪತ್ರಿಕೆಯನ್ನು ಬಾಹುಬಲಿ ಶಾ ಮತ್ತು ಅವರ ಸಹೋದರ ಶ್ರೇಯಂಶ್ ಶಾ ಮುನ್ನಡೆಸುತ್ತಿದ್ದಾರೆ.
'ಆದಾಯ ತೆರಿಗೆ ಇಲಾಖೆಯಿಂದ (ಐಟಿ) ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಇ.ಡಿ ಬಾಹುಬಲಿ ಶಾ ಅವರನ್ನು ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶಾತ್ಮಕ ಬರಹವೇ ಬಾಹುಬಲಿ ಶಾ ಬಂಧನದ ಹಿಂದಿರುವ ಕಾರಣ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಶಕ್ತಿಸಿನ್ಹ್ ಗೋಹಿಲ್ ಟೀಕಿಸಿದ್ದಾರೆ.
'ಗುಜರಾತ್ ಸಮಾಚಾರ್' ಸುದ್ದಿ ವಾಹಿನಿಯಲ್ಲಿ ಚರ್ಚಾ ಕಾರ್ಯಕ್ರಮವನ್ನು ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಗುಜರಾತ್ ಅಧ್ಯಕ್ಷ ಇಸುದನ್ ಗಧ್ವಿ ಮಾತನಾಡಿ, ಐಟಿ ಮತ್ತು ಇ.ಡಿ ನಡೆಸಿದ ದಾಳಿಗಳನ್ನು ಟೀಕಿಸಿದ್ದಾರೆ. ಜತೆಗೆ, ಇದು ಪತ್ರಿಕೆಯನ್ನು ನಿರ್ಭೀತ ಪತ್ರಿಕೋದ್ಯಮವನ್ನು ಅನುಸರಿಸದಂತೆ ಬೆದರಿಸುವ ಪ್ರಯತ್ನವಾಗಿದೆ ಎಂದೂ ಆರೋಪಿಸಿದ್ದಾರೆ.




