ನವದೆಹಲಿ, ಜೂನ್ 15: ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ನಡೆದ ಸಂಘರ್ಷದಲ್ಲಿ (Operation Sindoor) ಭಾರತದ ಮೂರು ರಫೇಲ್ ಜೆಟ್ಗಳನ್ನು ಹೊಡೆದುಹಾಕಿದ್ದೇವೆ ಎಂದು ಹೇಳಿಕೊಂಡು ಬೀಗುತ್ತಿರುವ ಪಾಕಿಸ್ತಾನಕ್ಕೆ ರಫೇಲ್ ತಯಾರಕ ಡಸ್ಸೋ ಏವಿಯೇಶನ್ ಸಿಇಒ ಎರಿಕ್ ಟ್ರ್ಯಾಪಿಯರ್ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಹೇಳುತ್ತಿರುವುದು ವಾಸ್ತವಕ್ಕೆ ದೂರವಾಗಿದೆ ಎಂದಿದ್ದಾರೆ. ಐರೋಪ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎರಿಕ್ ಟ್ರ್ಯಾಪಿಯರ್ ಅವರು ರಫೇಲ್ ಬಗ್ಗೆ ಮಾತನಾಡಿ, ಪಾಕಿಸ್ತಾನದ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂದೂರ ನಡೆಸಿ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣಗಳನ್ನು ನಾಶ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಕಾರ್ಯಾಚರಣೆ ನಡೆಸಿತು. ಈ ಸಂಘರ್ಷದಲ್ಲಿ ಮೂರು ರಫೇಲ್ ಸೇರಿದಂತೆ ಭಾರತದ ಐದು ಜೆಟ್ಗಳನ್ನು ಹೊಡೆದುಹಾಕಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ.
ಈ ಬಗ್ಗೆ ಭಾರತೀಯ ಸೇನೆ ನಿಖರ ದತ್ತಾಂಶ ಒದಗಿಸಿಲ್ಲ. ಹಾನಿಯಾಗಿರುವುದು ಹೌದು. ಆದರೆ, ಪಾಕಿಸ್ತಾನ ಹೇಳಿಕೊಂಡಂತೆ ಐದು ಜೆಟ್ಗಳು ಪತನಗೊಂಡಿರುವುದು ನಿಜವಲ್ಲ ಎಂದು ವಾಯು ಸೇನೆ ಮುಖ್ಯಸ್ಥರು ಹೇಳಿದ್ದರು. ಆದರೆ, ರಫೇಲ್ ಹೆಸರನ್ನು ಪ್ರಸ್ತಾಪ ಮಾಡಿಲ್ಲ.
ನಿಜ ಹೊರಬಂದರೆ ಅಚ್ಚರಿಯಾಗಬಹುದು: ಎರಿಕ್
ಯುದ್ಧದಲ್ಲಿ ಜೆಟ್ಗಳನ್ನು ಕಳೆದುಕೊಂಡಿರಬಹುದು. ಆದರೆ, ಗುರಿಯಲ್ಲಿ ಗೆದ್ದಿದ್ದೇವಾ ಎನ್ನುವುದು ಮುಖ್ಯ ಎಂದ ಭಾರತೀಯ ಮಿಲಿಟರಿಯ ಅಭಿಪ್ರಾಯವನ್ನು ಎರಿಕ್ ಟ್ರ್ಯಾಪಿಯರ್ ಪುನರುಚ್ಚರಿಸಿದ್ದಾರೆ.
'ಮೂರು ರಫೇಲ್ಗಳನ್ನು ಹೊಡೆದುಹಾಕಲಾಗಿದೆ ಎನ್ನುವುದು ಸತ್ಯವಲ್ಲ. ಸಂಪೂರ್ಣ ಮಾಹಿತಿ ಹೊರಬಂದರೆ ಹಲವರಿಗೆ ಅದು ಅಚ್ಚರಿ ಎನಿಸಬಹುದು. ಚಕಮಕಿಯಲ್ಲಿ ಯಶಸ್ಸು ಪಡೆಯುವುದೆಂದರೆ ಯಾವುದೇ ಹಾನಿಯಾಗಬಾರದು ಎಂದಲ್ಲ, ಆದರೆ, ಉದ್ದೇಶ ಈಡೇರಿದೆಯಾ ಎನ್ನುವುದು ಮುಖ್ಯ' ಎಂದು ಡಸ್ಸೋ ಏವಿಯೇಶನ್ ಸಿಇಒ ಹೇಳಿದ್ದಾರೆ.




