ನವದೆಹಲಿ: ಭಯೋತ್ಪಾದನೆಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸುವವರೆಗೆ ಭಾರತವು ಸಿಂಧೂ ಜಲ ಒಪ್ಪಂದದ(ಐಡಬ್ಲ್ಯೂಟಿ) ಕುರಿತಂತೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ವಿಶ್ವಬ್ಯಾಂಕ್ನ ಮಧ್ಯಸ್ಥಿಕೆಯಲ್ಲಿ 1960ರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ವಿತರಣೆ ಹಾಗೂ ಬಳಕೆಯನ್ನು ಐಡಬ್ಲ್ಯೂಟಿ ಮೂಲಕ ನಿಯಂತ್ರಿಸಲಾಗುತ್ತಿದೆ.
ಐಡಬ್ಲ್ಯೂಟಿಯನ್ನು ಸ್ಥಗಿತಗೊಳಿಸಿರುವ ನಿರ್ಧಾರವನ್ನು ಭಾರತ ಮರುಪರಿಶೀಲಿಸುವಂತೆ ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಅವರು ಹಲವು ಬಾರಿ ಒತ್ತಾಯಿಸಿದ್ದಾರೆ. ಭಾರತೀಯ ಜಲಸಂಪನ್ಮೂಲ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಅವರಿಗೆ ಬರೆದ ಹಲವು ಪತ್ರಗಳಲ್ಲಿ ಭಾರತ ಎತ್ತಿರುವ ನಿರ್ದಿಷ್ಟ ಆಕ್ಷೇಪಣೆಗಳನ್ನು ಚರ್ಚಿಸಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಮುರ್ತಾಜಾ ಹಲವು ಬಾರಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತವು ಪಾಕಿಸ್ತಾನದ ಯಾವುದೇ ಪತ್ರಗಳಿಗೆ ಪ್ರತಿಕ್ರಿಯಿಸಿಲ್ಲ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತದ ಕಳವಳಗಳನ್ನು ಪರಿಹರಿಸುವವರೆಗೆ ನೆರೆಯ ದೇಶದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
26 ಜನರು ಹತ್ಯೆಯಾದ ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ 1960ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು.
ಸಿಂಧೂ ನದಿ ವ್ಯವಸ್ಥೆಯು ಮುಖ್ಯ ನದಿಯಾದ ಸಿಂಧೂ ಮತ್ತು ಅದರ ಉಪನದಿಗಳನ್ನು ಒಳಗೊಂಡಿದೆ. ರಾವಿ, ಬಿಯಾಸ್ ಮತ್ತು ಸಟ್ಲೆಜ್ಗಳನ್ನು ಒಟ್ಟಾಗಿ ಪೂರ್ವ ನದಿಗಳು ಎಂದು ಕರೆಯಲಾಗುತ್ತದೆ. ಆದರೆ ಸಿಂಧೂ, ಝೀಲಂ ಮತ್ತು ಚೆನಾಬ್ಗಳನ್ನು ಪಶ್ಚಿಮ ನದಿಗಳು ಎಂದು ಕರೆಯಲಾಗುತ್ತದೆ.
ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಸಿಂಧೂ ನದಿ ನಿರನ್ನು ಸ್ಥಗಿತಗೊಳಿಸಿದ ನಂತರ, ನೀರಿನ ಬಳಕೆಯನ್ನು ಗರಿಷ್ಠಗೊಳಿಸಲು ಭಾರತವು ಉದ್ದೇಶಿಸಿದೆ. ಈ ಸಂಬಂಧ ಹೊಸ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ನೀರಿನ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸುವುದು ಮತ್ತು ಭಾರತದ ಹಕ್ಕುಗಳನ್ನು ಸಂಪೂರ್ಣವಾಗಿ ಸಾಧಿಸಲು ಅಧ್ಯಯನ ಕೈಗೊಂಡಿದೆ.




