ಪೆರ್ಲ: ಸಾಂದೀಪನಿ ಯೋಗ ಸೇವಾಲಯ ಪಳ್ಳತಡ್ಕ, ಉಕ್ಕಿನಡ್ಕ ಆಯುರ್ವೇದ ಆಸ್ಪತ್ರೆ, ಹಾಗೂ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪೆರ್ಲದ ಭಾರತಿ ಸದನದಲ್ಲಿ ವಿಶ್ವ ಯೋಗ ದಿನಾಚರಣೆ 'ಯೋಗಾಭಿನಮನಂ' ಆಚರಿಸಲಾಯಿತು. ಜೂನ್ 14ರಿಂದ 20ರವರೆಗೆ ಮಹಿಳೆಯರು ಮತ್ತು ಮಕ್ಕಳಿಗಾಗಿ ಡಾ. ಸಪ್ನಾ ಜೆ ಉಕ್ಕಿನಡ್ಕ ನೇತೃತ್ವದಲ್ಲಿ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭ ಪುರುಷರಿಗಾಗಿ ಒಂದು ವಾರಗಳ ಯೋಗ ತರಗತಿಯನ್ನು ಯೋಗ ಗುರು ಪುಂಡರಿಕಾಕ್ಷ ಬೆಳ್ಳೂರು ನಡೆಸಿಕೊಟ್ಟರು.
ಯೋಗ ಶಿಬಿರದ ಸಮಾರೋಪ ಸಮಾರಂಭವು ಶಂಖನಾದದೊಂದಿಗೆ ಸಾಮೂಹಿಕ ಓಂಕಾರ ಪ್ರಾರ್ಥನೆಯೊಂದಿಗೆ ಜರುಗಿತು. ಈ ಸಂದರ್ಭ ಶಿಬಿರದ ಯೋಗಭ್ಯಾಸಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಯೋಗ ಪ್ರತಿಭೆ ಸನ್ನಿಧಿಯ ವಿಶೇಷ ಯೋಗ ಪ್ರದರ್ಶನ ಜನ ಮೆಚ್ಚುಗೆ ಪಡೆಯಿತು. ಮಲ್ಲೇಶ್ ಅವರು ಯೋಗದ ಕುರಿತ ಹಾಡು ಹಾಡಿದರು. ಅಧ್ಯಾಪಕ ಕುಮಾರಸುಬ್ರಹ್ಮಣ್ಯ ಯೋಗದ ಮಹತ್ವ ವಿವರಿಸಿದರು. ಖ್ಯಾತ ವೈದ್ಯೆ ಡಾ. ಸಪ್ನಾ ಜೆ ಉಕ್ಕಿನಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನಶೈಲಿ ರೋಗಗಳನ್ನು ಬಾರದಂತೆ ತಡೆಗಟ್ಟುವಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ. ವಿವಿಧ ಆಸನಗಳು ಹಾಗೂ ಪ್ರಾಣಾಯಾಮ ನಿರಂತರ ನಡೆಸುವುದರಿಂದ ನಮ್ಮ ಆರೋಗ್ಯವನ್ನು ಔಷಧರಹಿತವಾಗಿ ಪೋಷಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ರವಿಶಂಕರ್ ನೆಗಳಗುಳಿ ಸ್ವಾಗತಿಸಿದರು. ಸದಾಶಿವ ಕಡಂಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೋಗ ಶಿಕ್ಷಕಿ ಶ್ರೀಮತಿ ದಿವ್ಯಾ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಮಾವಿನಕಟ್ಟೆ ವಂದಿಸಿದರು. ಸೀತಾರಾಮ್ ಮುಂಗಿಲ ಶಾಂತಿ ಮಂತ್ರ ಹೇಳಿದರು.




