
ಭಾರತೀಯ ಶುಭಾಂಶು ಶುಕ್ಲಾ ಅವರ ಅಂತರಿಕ್ಷ ಯಾನ ಆರಂಭವಾಗಿದೆ.
ಇಂದು ಮಧ್ಯಾಹ್ನ ಸರಿಯಾಗಿ 12.01ಕ್ಕೆ ಆಯಕ್ಸಿಯೋಂ ನೌಕೆ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿತು. ಶುಭಾಂಶು ಶುಕ್ಲಾ 41 ವರ್ಷಗಳ ಬಳಿಕ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ತಾಂತ್ರಿಕ ಮತ್ತು ಹವಾಮಾನ್ಯ ವೈಪರೀತ್ಯದ ಕಾರಣ ಉಡ್ಡಯನ ಪದೇ ಪದೇ ಮುಂದೂಡಿಕೆಯಾಗಿತ್ತು. ಶುಭಾಂಶು ಶುಕ್ಲಾ ಸೇರಿದಂತೆ ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ನ ಸ್ಲವೋಝ್ ಉಝ್ನಾಸ್ಕಿ, ಹಂಗರಿಯ ಟಿಬರ್ ಕಪು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸೆಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿ ಐಎಸ್ಎಸ್ಗೆ ಈ ನಾಲ್ವರು ತೆರಳಿದ್ದಾರೆ.

ನಾಸಾ ನೀಡಿರುವ ಮಾಹಿತಿ ಪ್ರಕಾರ, ನೌಕೆ ಗುರುವಾರ ಸಂಜೆ 4.30ರವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಎಂಬ ದಾಖಲೆಗೆ ಶುಭಾಂಶು ಶುಕ್ಲಾ ಪಾತ್ರವಾಗಲಿದ್ದಾರೆ.

ಈ ನಾಲ್ವರು 14 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿರಲಿದ್ದು, 60 ರೀತಿಯ ವಿವಿಧ ಪ್ರಯೋಗಗಳನ್ನು ನಡೆಸಲಿದ್ದಾರೆ. 60ರಲ್ಲಿ 7 ಪ್ರಯೋಗಗಳನ್ನು ಶುಭಾಂಶು ಶುಕ್ಲಾ ಮಾಡಲಿದ್ದಾರೆ. 14 ಪ್ರಯಾಣದ ವೇಳೆ ಶುಭಾಂಶು ಶುಕ್ಲಾ ತಮ್ಮ ಜೊತೆಯಲ್ಲಿ ಮೈಸೂರು ಹಲ್ವಾ, ಮಾವಿನ ಹಣ್ಣಿನ ರಸ ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ

ಮೊದಲ ಬಾರಿಗೆ 1984ರಲ್ಲಿ ರಾಕೇಶ್ ಶರ್ಮಾ ರಷ್ಯಾದ ಸೂಯೆಜ್ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಇದಾದ ಬಳಿಕ ಭಾರತ ಮೂಲದವರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅಂತರಿಕ್ಷಕ್ಕೆ ತೆರಳಿದ್ದರು. ಆದ್ರೆ ಇವರು ಭಾರತೀಯ ಮೂಲದ ಅಮೆರಿಕ ಪ್ರಜೆಗಳೇ ಹೊರತು ಭಾರತೀಯ ಪ್ರಜೆ ಅಲ್ಲ. ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು 500 ಕೋಟಿ ರೂ. ಖರ್ಚು ಮಾಡಿದೆ.




