ಕಾಸರಗೋಡು: ಚಾತುರ್ಮಾಸ್ಯ ವ್ರತಾಚರಣೆಯ ಪುಣ್ಯಕಾಲ ಸನ್ಯಾಸಿವರ್ಗದವರಿಗೆ ಎಷ್ಟು ಪ್ರಾಮುಖ್ಯವೋ, ಭಕ್ತಾದಿಗಳಿಗೂ ಷ್ಟೇ ಪಾವಿತ್ರ್ಯದಿಂದ ಕೂಡಿರುವುದಾಗಿದೆ ಎಂದು ಶ್ರೀ ಮಧ್ವಾಚಾರ್ಯ ಮೂಲಸಂಸ್ಥಾನಂ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದ್ದಾರೆ
ಅವರು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಐದನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಆಂಗವಾಗಿ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ ಆಳ್ವ ಸಮಾರಂಭ ಉದ್ಘಾಟಿಸಿ ಮಾತನಾಡಿ ಆರು ಸಾವಿರ ವರ್ಷಗಳಷ್ಟು ಪುರಾತನ ಸಂಸ್ಕøತಿ ಹೊಂದಿರುವ ಸನಾತನ ಧರ್ಮ ಶ್ರೀಮಂತವಾಗಿ ಬೆಳೆದುನಿಲ್ಲುವಲ್ಲಿ ಋಷಿಪುಂಗವರ ಕೊಡುಗೆಯೂ ಮಹತ್ತರವಾದುದು. ಹಲವು ಮತಗಳಿಗೆ, ಸಂಸ್ಕøತಿಗೆ ಆಶ್ರಯ ನೀಡಿರುವ ಭಾರತ ಆಧ್ಯಾತ್ಮಿಕ ಚಿಂತನೆ ಭಾರತವನ್ನು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿರುವುದಾಗಿ ತಿಳಿಸಿದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಜಗತ್ತಿಗೆ ಆಧ್ಯಾತ್ಮಿಕ ಬೋಧನೆ ನೀಡಿರುವ ಭಾರತ, ಇಂದು ವಿಶ್ವಗುರುವಿನ ಸ್ಥಾನವನ್ನಲಂಕರಿಸಲು ದಾಪುಗಾಲಿಡುತ್ತಿದೆ. ಸಂತರ ನಾಡಾಗಿರುವ ಭಾರತದ ಆಧ್ಯಾತ್ಮಿಕ ಪರಂಪರೆಗೆ ಸನ್ಯಾಸಿವರ್ಯರ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.
ಖ್ಯಾತ ಯಕ್ಷಗಾನ ಹಿಮ್ಮೇಳ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ. ಸೀತಾರಾಮ ತೋಳ್ಪಡಿತ್ತಾಯ ಅವರನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ಗೌರವಿಸಿದರು. ರಾಜಾರಾಮ ಪೆರ್ಲ ಅಭಿನಂದನಾ ಪತ್ರ ವಾಚಿಸಿದರು.
ಶ್ರೀ ಎಡನೀರು ಮಠದ 'ಯೂಟ್ಯೂಬ್ ಚಾನೆಲ್'ಆನಂದ ಭಾರತಿ'ಯನ್ನು ಖ್ಯಾತ ಅನಿವಾಸಿ ಉದ್ಯಮಿ, ಎಡಕ್ಕಾನ ಮಹಾಬಲೇಶ್ವರ ಭಟ್ ಲೋಕಾರ್ಪಣೆಗೈದರು. ಉದ್ಯಮಿ ಸುರೇಶ್ ನಾಯಕ್ ಪೂನಾ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಅಧ್ಯಕ್ಷ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಸ್ವಾಗತಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ವ್ರತಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಕಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ 'ವೇಣು ನಿನಾದ' ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಚೆನ್ನೈ ಕೊಳಲು, ವಿದ್ವಾನ್ ವಿಠಲ್ ರಾಮಮೂರ್ತಿ ಚೆನ್ನೈ ವಯಲಿನ್ ಹಾಗೂ ವಿದ್ವಾನ್ ಪತ್ರಿ ಸತೀಶ್ ಕುಮಾರ್ ಚೆನ್ನೈ ಮೃದಂಗದಲ್ಲಿ ಸಹಕರಿಸಿದರು.



