ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸ್ಪೈಸ್ ಜೆಟ್ ವಿಮಾನದ ಕಾಕ್ಪಿಟ್ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ ಇಬ್ಬರು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು.
ಟೇಕಾಫ್ ಮಾಡಲು ವಿಮಾನವು ಗೊತ್ತುಪಡಿಸಿದ ರನ್ವೇಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಇದರಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಭಯಭೀತರಾಗಿದ್ದರು.
'ಎಸ್ಜಿ 9282 ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ಅಶಿಸ್ತಿನ ವರ್ತನೆ ತೋರಿದ್ದಾರೆ. ಬಲವಂತವಾಗಿ ಕಾಕ್ಪಿಟ್ಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಕ್ಯಾಪ್ಟನ್, ಕ್ಯಾಬಿನ್ ಸಿಬ್ಬಂದಿ, ಸಹ ಪ್ರಯಾಣಿಕರು ಪದೇ ಪದೇ ಎಚ್ಚರಿಕೆ ನೀಡಿದ್ದರೂ ತಮ್ಮ ಆಸನಗಳಿಗೆ ಹಿಂತಿರುಗಲು ನಿರಾಕರಿಸಿದ್ದಾರೆ. ಇದರಿಂದ ವಿಮಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು' ಎಂದು ಸ್ಪೈಸ್ಜೆಟ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟಕೊಂಡು ಕ್ಯಾಪ್ಟನ್ ವಿಮಾನವನ್ನು ರನ್ವೇಯಿಂದ ನಿಲುಗಡೆಯ ಸ್ಥಳಕ್ಕೆ ತರಲು ನಿರ್ಧರಿಸಿದರು' ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ನಂತರ ಇಬ್ಬರು ಪ್ರಯಾಣಿಕರನ್ನು ಕೆಳಗಿಳಿಸಿ ಮುಂದಿನ ಕ್ರಮಕ್ಕಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ(ಸಿಐಎಸ್ಎಫ್) ಹಸ್ತಾಂತರಿಸಲಾಯಿತು ಎಂದು ತಿಳಿಸಿದ್ದಾರೆ.
ಸ್ಪೈಸ್ ಜೆಟ್ ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಮುಂಬೈಗೆ ಮಧ್ಯಾಹ್ನ 12:30ಕ್ಕೆ ಹೊರಡಬೇಕಿತ್ತು. ಈ ಘಟನೆಯಿಂದ ವಿಮಾನವು ರಾತ್ರಿ 7:21ಕ್ಕೆ ತನ್ನ ಗಮ್ಯಸ್ಥಾನಕ್ಕೆ ಹೊರಟಿತ್ತು ಎಂದು ಫ್ಲೈಟ್ರೆಡಾರ್24.ಕಾಮ್ ವೆಬ್ಸೈಟ್ ವರದಿ ಮಾಡಿದೆ.




