ಕುಂಬಳೆ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿಯ ವತಿಯಿಂದ ಅಧ್ಯಾಪಕರು, ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದುವ 2025 ರ ಇಲಾಖೆ ಪರೀಕ್ಷೆ ಕೆ.ಎಸ್.ಆರ್ ಮತ್ತು ಕೆ.ಇ.ಆರ್ ನ ತರಗತಿ ಮತ್ತು ಅಧ್ಯಾಪಕರ ಯೋಗ್ಯತಾ ಪರೀಕ್ಷೆ ಕೆ ಟೆಟ್ ತರಬೇತಿ ತರಗತಿಯ ಉದ್ಘಾಟನೆ ಕುಂಬಳೆ ಸರ್ಕಾರಿ ಹಿರಿಯ ಬುನಾದಿ ಶಾಲೆಯಲ್ಲಿ ಶನಿವಾರ ನಡೆಯಿತು. ಸತತ ಆರು ವರ್ಷಗಳಿಂದ ಕನ್ನಡ ಮಾಧ್ಯಮ ಅಧ್ಯಾಪಕರಿಗೆ ಇಲಾಖಾ ಪರೀಕ್ಷೆಯ ತರಬೇತಿ ತರಗತಿಗಳನ್ನು ಉಚಿತವಾಗಿ ಕನ್ನಡ ಅಧ್ಯಾಪಕ ಸಂಘಟನೆಯು ನೀಡುತ್ತಿದೆ.
ಕೆ.ಟೆಟ್ ಪರೀಕ್ಷೆಯ 2025 ನೇ ಸಾಲಿನ ಈ ತರಬೇತಿ ತರಗತಿಯನ್ನು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ, ವಕೀಲ ಎನ್.ಕೆ. ಮೋಹನದಾಸ್ ಉದ್ಘಾಟಿಸಿದರು. ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣಾಧಿಕಾರಿ ಸವಿತಾ ಪಿ. ಹಾಗೂ ಕುಂಬಳೆ ಉಪಜಿಲ್ಲಾ ಶಿಕ್ಷಣಧಿಕಾರಿ ಶಶಿಧರ ಯಂ. ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಜಯರಾಮ ಸಿ.ಎಚ್, ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಡಾ.ಶ್ರೀಶಕುಮಾರ ಪಂಜಿತ್ತಡ್ಕ, ಸರಸ್ವತಿ ಟೀಚರ್ ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕೇಂದ್ರ ಸಮಿತಿ ಕೋಶಾಧಿಕಾರಿ ಶರತ್ ಕುಮಾರ್ ಯಂ. ವಂದಿಸಿದರು. ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಬಿ. ಕಾರ್ಯಕ್ರಮ ನಿರೂಪಿಸಿದರು.







