ಬದಿಯಡ್ಕ: ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಲು ಸಂಘಟನೆಯಲ್ಲಿ ಎಲ್ಲಾ ಸದಸ್ಯರೂ ಸಕ್ರಿಯರಾಗಬೇಕು. ಸಂಘಟನೆಯ ವತಿಯಿಂದ ನೀಡಲಾಗುವ ಎಲ್ಲಾ ಜನಪರಯೋಜನೆಗಳಲ್ಲಿ ಪ್ರತಿಯೊಬ್ಬ ಸದಸ್ಯನೂ ಪಾಲ್ಗೊಂಡು ಲಭಿಸುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಉಪಾಧ್ಯಕ್ಷ, ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಅಹಮ್ಮದ್ ಶರೀಫ್ ಅಭಿಪ್ರಾಯಪಟ್ಟರು.
ಬದಿಯಡ್ಕ ಮರ್ಚೆಂಟ್ಸ್ ಹಾಗೂ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್ ಬದಿಯಡ್ಕ ಇದರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಿಯಡ್ಕ ಸರ್ರಾರಿ ಆಸ್ಪತ್ರೆಯ ಸಮೀಪದ ಮನುಕುಲ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಜರಗಿದ ಮಹಾಸಭೆಯಲ್ಲಿ ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್. ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹಮೀದ್ ಬರಾಕಾ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಜ್ಞಾನದೇವ ಶೆಣೈ ಲೆಕ್ಕಪತ್ರ ಮಂಡಿಸಿದರು. ನೂತನ ಸದಸ್ಯರಿಗೆ ಜಿಲ್ಲಾ ಕಾರ್ಯದರ್ಶಿ ದಿನೇಶ್ ಸದಸ್ಯತನ ಕಾರ್ಡ್ ಹಸ್ತಾಂತರಿಸಿದರು. ಮೃತರಾದ ಸದಸ್ಯರ ಮನೆಯವರಿಗೆ ನೀಡಲಾಗುವ ಜಿಲ್ಲಾಸಮಿತಿಯ ಧನಸಹಾಯವನ್ನು ಜಿಲ್ಲಾ ಕಾರ್ಯದರ್ಶಿ ಕೆ.ವಿ.ದಾಮೋದರನ್ ಫಲಾನುಭವಿಗಳಿಗೆ ನೀಡಿದರು. ಹಿರಿಯ ವ್ಯಾಪಾರಿಗಳನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವ್ಯಾಪಾರಿ ಸದಸ್ಯರ ಹಾಗೂ ವ್ಯಾಪಾರಿ ಸಂಸ್ಥೆಗಳಲ್ಲಿ ದುಡಿಯುವವರ ಮಕ್ಕಳಿಗೆ ಅಭಿನಂದನೆಯನ್ನು ಸಲ್ಲಿಸಿ ಸ್ಮರಣಿಕೆಯನ್ನು ನೀಡಲಾಯಿತು. ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾದ ನವೀನ್ ಪೈ ಬದಿಯಡ್ಕ, ಸ್ಥಾಪಕ ಸದಸ್ಯರಾದ ರತ್ನಾಕರ ಎಸ್.ಓಡಂಗಲ್ಲು ಹಾಗೂ ಅಖಿಲೇಶ್ ನಗುಮುಗಂ ಇವರನ್ನು ಸನ್ಮಾನಿಸಲಾಯಿತು. ಬದಿಯಡ್ಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ನಿರ್ಮಿಸಿದ ಎಲ್ಇಡಿ ಬಲ್ಬ್ಗಳನ್ನು ಘಟಕದ ಎಲ್ಲಾ ಸದಸ್ಯರಿಗೂ ವಿತರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕುಂಜಾರು ಮುಹಮ್ಮದ್ ಕುಂಞÂ ಹಾಜಿ, ಎಸ್.ಎನ್.ಮಯ್ಯ, ಉಪಾಧ್ಯಕ್ಷ ರಾಜುಸ್ಟೀಫನ್ ಕ್ರಾಸ್ತ, ಕಾರ್ಯದರ್ಶಿ ವಿಶ್ವನಾಥನ್, ವನಿತಾವಿಂಗ್ ಪ್ರಮುಖರಾದ ಜಯಂತಿ ಚೆಟ್ಟಿಯಾರ್, ಕೃಪಾಯತೀಶ್, ಯೂತ್ ವಿಂಗ್ ಪ್ರಮುಖರಾದ ಸುಬ್ರಹ್ಮಣ್ಯ ಪೈ, ಶಾಹಿದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕದ ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ ಸ್ವಾಗತಿಸಿ, ಉದಯ ಶಂಕರ ವಂದಿಸಿದರು.




