ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ಮಾಸ್ಕೋಗೆ ಮೂರು ದಿನಗಳ ಭೇಟಿಗೆ ತೆರಳಿದ್ದಾರೆ. ಭೇಟಿಯಲ್ಲಿ ಭಾರತ-ರಷ್ಯಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ.
ಭಾರತದ ರಷ್ಯಾ ಕಚ್ಚಾ ತೈಲ ಖರೀದಿಗೆ ಶೇ 25ರಷ್ಟು ಹೆಚ್ಚುವರಿ ದಂಡವನ್ನು ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಏರಿಸಿದ್ದರು. ಇದರ ನಂತರ ಭಾರತ-ಅಮೆರಿಕ ಸಂಬಂಧದಲ್ಲಿ ಉಂಟಾದ ಒತ್ತಡದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ.
ಬುಧವಾರ ನಡೆಯಲಿರುವ 26ನೇ ಭಾರತ-ರಷ್ಯಾ ಅಂತರ ಸರ್ಕಾರ ಆಯೋಗದ (ಐಆರ್ಐಜಿಸಿ-ಟಿಇಸಿ) ಸಭೆಯ ಜಂಟಿ ಅಧ್ಯಕ್ಷತೆಯನ್ನು ಜೈಶಂಕರ್ ವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ರಷ್ಯಾದ ಮೊದಲ ಉಪಪ್ರಧಾನಿ ಡೆನಿಸ್ ಮಂಟುರೊ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಅದನ್ನು ಈ ಸಭೆಯು ಸುಗಮಗೊಳಿಸುವ ನಿರೀಕ್ಷೆ ಇದೆ.
ಉಕ್ರೇನ್ನಲ್ಲಿ ಶಾಂತಿಯ ಬಗ್ಗೆ ಟ್ರಂಪ್ ಆಡಳಿತದ ಕೈಗೊಂಡ ಉಪಕ್ರಮಗಳ ಬಗ್ಗೆ ಕೂಡ ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.




