ಕಾಸರಗೋಡು: ಸಮಾಜದ ಕೆಳ ಹಂತದವರಿಗೂ ಪ್ರಯೋಜನಗಳು ಲಭಿಸುವಂತೆ ಬ್ಯಾಂಕ್ ಗಳು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಹೇಳಿದರು.
ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಬ್ಯಾಂಕ್ಗಳ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡಿದರು.
ಜಿಲ್ಲೆಯ ದೂರದ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಮಳಿಗೆಗಳನ್ನು ತೆರೆಯಬೇಕು ಮತ್ತು ಆನ್ಲೈನ್ ಹಣಕಾಸು ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಬ್ಯಾಂಕ್ ಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಜಿಲ್ಲೆಯ ಬ್ಯಾಂಕ್ ಗಳ ಒಟ್ಟು ಠೇವಣಿ 8462.93 ಕೋಟಿ ರೂ. ಮತ್ತು ಸಾಲಗಳು 16665.09 ಕೋಟಿ ರೂ.ಗಳಷ್ಟಿತ್ತು. ಜಿಲ್ಲೆಯಲ್ಲಿ ಸಾಲ-ಠೇವಣಿ ಅನುಪಾತವು ಶೇಕಡಾ 90.26 ರಷ್ಟಿದೆ. ಜಿಲ್ಲೆಯ ಬ್ಯಾಂಕ್ ಗಳು 2025-26 ರ ಏಪ್ರಿಲ್ನಿಂದ ಜೂನ್ ವರೆಗೆ 3662.15 ಕೋಟಿ ರೂ.ಗಳ ಸಾಲವನ್ನು ವಿತರಿಸಿವೆ. ಜಿಲ್ಲೆಯ ಬ್ಯಾಂಕ್ ಗಳು 7900 ಕೋಟಿ ರೂ. ಕೃಷಿ ಸಾಲದ ಗುರಿಯಲ್ಲಿ 1938 ಕೋಟಿ ರೂ. (25%) ಸಾಧಿಸಿವೆ. ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದಲ್ಲಿ 2053 ಕೋಟಿ ರೂ. ಗುರಿಯಲ್ಲಿ 633 ಕೋಟಿ ರೂ. (31%) ಸಾಧಿಸಲಾಗಿದೆ. ವಸತಿ ಮತ್ತು ಶಿಕ್ಷಣ ಸೇರಿದಂತೆ ತೃತೀಯ ವಲಯದಲ್ಲಿ 547 ಕೋಟಿ ರೂ. ಗುರಿಯಲ್ಲಿ 130 ಕೋಟಿ ರೂ. (24%) ಸಾಧಿಸಲಾಗಿದೆ. ಆದ್ಯತಾ ವಲಯದಲ್ಲಿ 10500 ಕೋಟಿ ರೂ. ಗುರಿಯಲ್ಲಿ 2702 ಕೋಟಿ ರೂ. (26%) ಸಾಧಿಸಲಾಗಿದೆ ಎಂದು ವಿವರಗಳನ್ನು ಹಂಚಿಕೊಳ್ಳಲಾಯಿತು.
ಸಭೆಯಲ್ಲಿ ಬ್ಯಾಂಕಿಂಗ್ ಭದ್ರತೆಯ ಕುರಿತು ಕಾಸರಗೋಡು ಹೆಚ್ಚುವರಿ ಎಸ್ಪಿ ದೇವದಾಸನ್ ಮಾತನಾಡಿದರು. ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಆರ್.ಪಿ. ಶ್ರೀನಾಥ್ ಮತ್ತು ಆರ್ಬಿಐ ಪ್ರತಿನಿಧಿ ಟಿ.ಕೆ. ಶ್ರೀಕಾಂತ್ ಮಾತನಾಡಿದರು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ತಿಪ್ಪೇಶ್ ಸ್ವಾಗತಿಸಿ, ಹಣಕಾಸು ಸಾಕ್ಷರತಾ ಸಲಹೆಗಾರ ಅಶೋಕ್ ವಂದಿಸಿದರು.





