ಕೊಚ್ಚಿ: ಹೈಸ್ಪೀಡ್ ರೈಲು ಸಾರಿಗೆ ವ್ಯವಸ್ಥೆಯಾದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ಆರ್ಟಿಸಿ) ಅನುಷ್ಠಾನಕ್ಕಾಗಿ ಕೇರಳವು ಡಿಪಿಆರ್ ಸಲ್ಲಿಸಿದರೆ ಕೇಂದ್ರವು ಸಹಕರಿಸಲಿದೆ ಎಂದು ಕೇಂದ್ರ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಕೊಚ್ಚಿಯಲ್ಲಿ ನಡೆದ ಕೇರಳ ನಗರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕ್ಷಿಪ್ರ ರೈಲು ಯೋಜನೆಯ ವಿಷಯವನ್ನು ಜನರ ಗಮನಕ್ಕೆ ತಂದರು ಎಂದು ಅವರು ಹೇಳಿದರು.
ಯೋಜನೆಗಳನ್ನು ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಎಂದು ಪ್ರತ್ಯೇಕಿಸಬಾರದು. ನಗರಾಭಿವೃದ್ಧಿ ಉಪಕ್ರಮಗಳ ಯಶಸ್ಸಿಗೆ ಸರ್ಕಾರದ ಎಲ್ಲಾ ಹಂತಗಳು ಒಟ್ಟಾಗಿ ಕೆಲಸ ಮಾಡಬೇಕು. ಕೊಚ್ಚಿ ಮೆಟ್ರೋ ಮತ್ತು ವಾಟರ್ ಮೆಟ್ರೋ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗುತ್ತಿದೆ. ಕೊಚ್ಚಿ ಮೆಟ್ರೋದ ಅಭಿವೃದ್ಧಿ ಯೋಜನೆಗಳು ಸಹ ನಡೆಯುತ್ತಿವೆ. ಕೇಂದ್ರ ಮತ್ತು ಕೇರಳ ಸರ್ಕಾರಗಳು ಈ ಎಲ್ಲಾ ಯೋಜನೆಗಳಲ್ಲಿ ಸಾಮಾನ್ಯ ತಿಳುವಳಿಕೆಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಕೊಚ್ಚಿ ಮತ್ತು ತಿರುವನಂತಪುರದಲ್ಲಿ ಜಾರಿಗೆ ತರಲಾಗುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೂ ಈ ಪಾಲುದಾರಿಕೆ ಮತ್ತು ಸಹಕಾರವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೇರಳವು ವಿಶ್ವದ ಅತಿ ಉದ್ದದ ರೇಖೀಯ ನಗರವಾಗುವ ಸಾಮಥ್ರ್ಯವನ್ನು ಹೊಂದಿರುವ ರಾಜ್ಯವಾಗಿದೆ ಎಂದು ಅವರು ಹೇಳಿದರು. ಕಾಸರಗೋಡಿನಿಂದ ತಿರುವನಂತಪುರಂವರೆಗಿನ 700 ಕಿ.ಮೀ ರಸ್ತೆಯ ಎರಡೂ ಬದಿಗಳಲ್ಲಿ ಕೇರಳವು ನಗರವಾಗಿ ಅಭಿವೃದ್ಧಿ ಹೊಂದುವ ಸಾಮಥ್ರ್ಯವನ್ನು ಹೊಂದಿದೆ. ಕೆಲವೇ ವರ್ಷಗಳಲ್ಲಿ, ಕೇರಳದಲ್ಲಿ ಶೇ. 95 ರಷ್ಟು ನಗರೀಕರಣ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಕೇರಳವು ದೇಶದ ಅತ್ಯಂತ ನಗರೀಕರಣಗೊಂಡ ರಾಜ್ಯವಾಗಲಿದೆ ಎಂದು ಅವರು ಹೇಳಿದರು. ದುಬೈ, ಸಿಂಗಾಪುರ, ಲಂಡನ್ ಮತ್ತು ವಾಷಿಂಗ್ಟನ್ನಂತಹ ಗುಣಮಟ್ಟದ ನಗರಗಳು ಭಾರತದಲ್ಲಿ ಬೆಳೆಯುತ್ತಿವೆ. ಕೇರಳವು ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅತ್ಯುತ್ತಮ ನಗರಗಳ ವಿಷಯದಲ್ಲಿ ಕೇರಳವು ದೇಶದಲ್ಲಿ ಮೊದಲ ಸ್ಥಾನವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಸಮಾವೇಶವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ನಗರೀಕರಣಕ್ಕೆ ಸಂಬಂಧಿಸಿದ ಸವಾಲುಗಳನ್ನು ಕೈಗೆತ್ತಿಕೊಂಡು ಅವಕಾಶಗಳಾಗಿ ಪರಿವರ್ತಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಸಚಿವ ಎಂ.ಬಿ. ರಾಜೇಶ್ ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಶ್ರೀಲಂಕಾದ ನಗರಾಭಿವೃದ್ಧಿ ಸಚಿವ ಅನುರ ಕರುಣಾತಿಲಕ, ದಕ್ಷಿಣ ಆಫ್ರಿಕಾದ ಮೂಲಸೌಕರ್ಯ ಕಾರ್ಯಕಾರಿ ಮಂಡಳಿ ಸದಸ್ಯ ಮಾರ್ಟಿನ್ ಮೇಯರ್, ಹಿಮಾಚಲ ಪ್ರದೇಶ ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್, ಸಚಿವರಾದ ಕೆ.ಎನ್. ಬಾಲಗೋಪಾಲ್, ಪಿ. ರಾಜೀವ್, ಕೊಚ್ಚಿ ಕಾಪೆರ್Çರೇಷನ್ ಮೇಯರ್ ಅಡ್ವ. ಎಂ. ಅನಿಲ್ ಕುಮಾರ್, ಮುಖ್ಯ ಕಾರ್ಯದರ್ಶಿ ಡಾ. ಎ. ಜಯತಿಲಕ್, ಕೇರಳ ನಗರ ನೀತಿ ಆಯೋಗದ ಅಧ್ಯಕ್ಷ ಪೆÇ್ರ. ಎಂ. ಸತೀಶ್ ಕುಮಾರ್, ಶಾಸಕರಾದ ಕೆ.ಎನ್. ಉನ್ನಿಕೃಷ್ಣನ್, ಕೆ.ಜೆ. ಮ್ಯಾಕ್ಸಿ, ಟಿ.ಜೆ. ವಿನೋದ್, ಕೆ. ಬಾಬು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶರ್ಮಿಳಾ ಮೇರಿ ಜೋಸೆಫ್, ಸ್ಥಳೀಯ ಸ್ವ-ಸರ್ಕಾರಿ ಇಲಾಖೆಯ ವಿಶೇಷ ಕಾರ್ಯದರ್ಶಿ ಡಾ. ಅದೀಲಾ ಅಬ್ದುಲ್ಲಾ, ವಿಶೇಷ ಕಾರ್ಯದರ್ಶಿ ಟಿ.ವಿ. ಅನುಪಮಾ, ಪ್ರಧಾನ ನಿರ್ದೇಶಕಿ ಜೆರೋಮ್ ಜಾರ್ಜ್, ಜಿಸಿಡಿಎ ಅಧ್ಯಕ್ಷ ಕೆ. ಚಂದ್ರನ್ ಪಿಳ್ಳೈ, ಪುರಸಭೆಗಳ ಮಂಡಳಿ ಅಧ್ಯಕ್ಷ ಎಂ. ಕೃಷ್ಣದಾಸ್, ಮುಳವುಕಾಡ್ ಪಂಚಾಯತ್ ಅಧ್ಯಕ್ಷ ವಿ.ಎಸ್. ಅಕ್ಬರ್ ಮತ್ತು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.




