ಕಾಸರಗೋಡು: ಅಮೀಬಿಕ್ ಮಿದುಳು ಜ್ವರದ ವಿರುದ್ಧ ಸಂಪೂರ್ಣ ಜಾಗರೂಕತೆ ಪಾಲಿಸುವುದರ ಜತೆಗೆ ಕುಡಿಯುವ ನೀರಿನ ಮೂಲಗಳನ್ನು ಶುದ್ಧೀಕರಿಸಿಟ್ಟುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಅವರು ನವಕೇರಳ ಕ್ರಿಯಾ ಯೋಜನೆ-2ರ ಅಂಗವಾಗಿ ಜಿಲ್ಲಾ ಯೋಜನಾ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾಥನಾಡಿದರು. ಮುಖ್ಯವಾಗಿ ನೀರಿನ ಮೂಲಕ ಹರಡುವ ಅಮೀಬಿಕ್ ಜ್ವರವನ್ನು ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಬಾವಿಗಳು ಮತ್ತು ಕುಡಿಯುವ ನೀರಿನ ಮೂಲಗಳ ನೀರಿನ ಗುಣಮಟ್ಟ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪ್ರಸಕ್ತ ಜಿಲ್ಲೆಯಲ್ಲಿ 12 ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳಿವೆ. ಇಲ್ಲಿಯವರೆಗೆ, ಈ ಪ್ರಯೋಗಾಲಯಗಳ ಮೂಲಕ 1179 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಯ್ಯೂರ್ ಜಿವಿಎಚ್ಎಸ್ಎಸ್, ಮಡಿಕೈ ಜಿವಿಎಚ್ಎಸ್ಎಸ್, ಬಳಾಲ್ ಜಿಎಚ್ಎಸ್ಎಸ್, ಪಟ್ಲಾ ಜಿಎಚ್ಎಸ್ಎಸ್, ಸಿಕೆಎನ್ಎಸ್ ಜಿಎಚ್ಎಸ್ಎಸ್ ಪಿಲಿಕೋಡ್, ಜಿಎಚ್ಎಸ್ಎಸ್ ಉದುಮ, ಜಿಎಚ್ಎಸ್ಎಸ್ ಬಂಗ್ರಮಂಜೇಶ್ವರಂ, ಜಿಎಚ್ಎಸ್ಎಸ್ ಕುಂಡಂಗುಳಿ, ಜಿವಿಎಚ್ಎಸ್ಎಸ್ ಮೊಗ್ರಾಲ್, ಜಿವಿಎಚ್ಎಸ್ಎಸ್ ಮುಳ್ಳೇರಿ, ಜಿಎಚ್ಎಸ್ಎಸ್ ಬಳಾಂತೋಡ್, ಜಿಎಚ್ಎಸ್ಎಸ್ಪೈವಳಿಕೆ ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳಿವೆ. ಸಾರ್ವಜನಿಕರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮುಖ್ಯ ಭಾಷಣ ಮಾಡಿದರು.
ಒಂದು ಸಸಿ ನೆಡುವ ಅಭಿಯಾನ:
ಜಿಲ್ಲೆಯಲ್ಲಿ 'ಒಂದು ಸಸಿ ನೆಡುವ' ಅಭಿಯಾನದನ್ವಯ ಒಟ್ಟು 2,80,592 ಸಸಿಗಳನ್ನು ನೆಡಲಾಗಿದೆ. ಜತೆಗೆ ಅಮೀಬಿಕ್ ಮಿದುಳು ಜ್ವರದ ವಿರುದ್ಧ ಹಮ್ಮಿಕೊಂಡಿರುವ 'ನೀರು ಜೀವ' ಅಭಿಯಾನದ ಅಂಗವಾಗಿ, ಜಿಲ್ಲೆಯ 5619 ಸಾರ್ವಜನಿಕ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. 12 ತ್ಯಾಜ್ಯ ಮುಕ್ತ ನವ ಕೇರಳ ಅಭಿಯಾನದ ಅಂಗವಾಗಿ 656 ಹಸಿರು ಶಾಲೆಗಳು ಮತ್ತು 2537 ಹಸಿರು ಸಂಸ್ಥೆಗಳನ್ನು ಸ್ವಚ್ಛಗೊಳಿಸಲಾಗಿದೆ. 65 ಹಸಿರು ಕಾಲೇಜುಗಳು, 34 ಹಸಿರು ನಗರಗಳು, 182 ಹಸಿರು ಸಾರ್ವಜನಿಕ ಸ್ಥಳಗಳು, 12175 ಹಸಿರು ನೆರೆಕರೆ ಕೂಟ, 14 ಹಸಿರು ಪ್ರವಾಸೋದ್ಯಮ ಕೇಂದ್ರಗಳು, 14 ಹಸಿರು ಕೆಎಸ್ಆರ್ಟಿಸಿಗಳು ಮತ್ತು 284 ಹಸಿರು ಗ್ರಂಥಾಲಯಗಳಲ್ಲಿ ಘೋಷಣೆ ನಡೆಸಿರುವುದಾಗಿ ಮಾಃಇತಿ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಕೀಲೆ ಎಸ್.ಎನ್. ಸರಿತಾ, ಡಿಪಿಸಿ ಸರ್ಕಾರದ ನಾಮನಿರ್ದೇಶಿತ ಸಿ.ಆರ್. ರಾಮಚಂದ್ರನ್, ನಗರಸಭಾ ಅಧ್ಯಕ್ಷರಾದ ಕೆ.ವಿ. ಸುಜಾತ, ಟಿ.ವಿ. ಶಾಂತಾ, ಮತ್ತು ದೇಲಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಪಿ. ಉಷಾ ಉಪಸ್ಥಿತರಿದ್ದರು.




