HEALTH TIPS

ಮಸೂದೆಗಳಿಗೆ ಅಂಕಿತ ಹಾಕಲು ಗಡುವು: ವಿಚಾರಣೆ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ ಎಂಬ ವಿಷಯದ ಕುರಿತು ಸಂವಿಧಾನದ 143ನೇ ವಿಧಿಯಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇಳಿರುವ ಪ್ರಶ್ನೆಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿತು.

ಆಗಸ್ಟ್ 19ರಿಂದ 10 ದಿನಗಳು ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ.ಎಸ್‌ ನರಸಿಂಹ ಹಾಗೂ ಎ.ಎಸ್ ಚಂದೂರ್ಕರ್ ಅವರಿದ್ದ ಪೀಠವು ತೀರ್ಪು ಕಾಯ್ದಿರಿಸಿದೆ.

ಕೊನೆಯದಾಗಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿಯವರ ವಾದವನ್ನು ಕೇಳಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತು.

ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ರಾಷ್ಟ್ರಪತಿ ಸಲಹೆ ವಿರುದ್ಧ ವಿರೋಧ ಪಕ್ಷಗಳ ಆಡಳಿತ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ, ತೆಲಂಗಾಣ, ಪಂಜಾಬ್ ಹಾಗೂ ಹಿಮಾಚಲ ‍ಪ್ರದೇಶ ರಾಜ್ಯಗಳು ವಾದ ಮಂಡಿಸಿದವು.

ಹಿರಿಯ ವಕೀಲರಾದ ಕೆ.ಕೆ ವೇಣುಗೋಪಾಲ್ ಹಾಗೂ ಕಪಿಲ್ ಸಿಬಲ್ ಕ್ರಮವಾಗಿ ಕೇರಳ ಹಾಗೂ ತಮಿಳುನಾಡು ಸರ್ಕಾರಗಳ ಪರವಾಗಿ ವಾದ ಮಂಡಿಸಿ, ರಾಷ್ಟ್ರಪತಿ ಸಲಹೆಗೆ ವಿರೋಧ ದಾಖಲಿಸಿದರು.

ರಾಜ್ಯಗಳ ವಿಧಾನಸಭೆಯಲ್ಲಿ ಅಂಗೀಕಾರವಾಗುವ ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ವಿಧಿಸಿ ಏಪ್ರಿಲ್ 8 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಬಗ್ಗೆ ರಾಷ್ಟ್ರಪತಿ ಸುಪ್ರೀಂ ಕೋರ್ಟ್‌ನ ಸಲಹೆ ಕೇಳಿದ್ದರು.

ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಜ್ಯಪಾಲ ಆರ್. ಎನ್ ರವಿ ಅಂಕಿತ ಹಾಕುವುದನ್ನು ವಿಳಂಬ ಮಾಡುತ್ತಿದ್ದದ್ದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆ ಪ್ರಕರಣದ ತೀರ್ಪು ನೀಡುವಾಗ ರಾಜ್ಯಪಾಲ ಹಾಗೂ ರಾಷ್ಟ್ರಪತಿಗೆ ಸುಪ್ರೀಂ ಕೋರ್ಟ್ ಕಾಲಮಿತಿ ವಿಧಿಸಿತ್ತು.

ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ಮಸೂದೆಗಳನ್ನು ತಡೆಹಿಡಿಯುವುದು ಹಾಗೂ ಮಸೂದೆಗಳನ್ನು ವಿಧಾನಸಭೆಗೆ ಹಿಂದುರಿಸಗದೇ ಇಟ್ಟುಕೊಳ್ಳುವ ಔಚಿತ್ಯವನ್ನು ಪ್ರಶ್ನಿಸಿದ ನ್ಯಾಯಪೀಠ, ಒಂದು ವೇಳೆ ಹೀಗಾದಲ್ಲಿ ಚುನಾಯಿತ ಸರ್ಕಾರ ರಾಜ್ಯಪಾಲರ ಮುಷ್ಠಿಯಲ್ಲಿದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಹತ್ತು ದಿನಗಳ ವಿಚಾರಣೆ ಅವಧಿಯಲ್ಲಿ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್, ವೇಣುಗೋಪಾಲ್, ಸಿಬಲ್, ಅಭಿಷೇಕ್ ಸಿಂಘ್ವಿ, ಅರವಿಂದ್ ದಾತಾರ್, ಗೋಪಾಲ್ ಸುಬ್ರಮಣಿಯನ್, ಮಣಿಂದರ್ ಸಿಂಗ್, ಎನ್ ಕೆ ಕೌಲ್, ಆನಂದ್ ಶರ್ಮಾ, ಪಿ ವಿಲ್ಸನ್ ಮತ್ತು ಗೋಪಾಲ್ ಶಂಕರನಾರಾಯಣನ್ ಮುಂತಾದ ವಕೀಲರ ವಾದಗಳನ್ನು ಆಲಿಸಿತು. ಸಂವಿಧಾನದ 200ನೇ ವಿಧಿಯಡಿಯಲ್ಲಿ ರಾಜ್ಯಪಾಲರ ಅಧಿಕಾರಗಳ ಕುರಿತು ಈ ಅರ್ಜಿಯನ್ನು ವಿಚಾರಣೆ ನಡೆಸಲಾಯಿತು.

ಬಿಜೆಪಿ ಆಡಳಿತ ಇರುವ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಒಡಿಶಾ, ಗೋವಾ ಹಾಗೂ ಛತ್ತೀಸಗಢ ಸರ್ಕಾರಗಳು, ಮಸೂದೆ ಅಂಗೀಕಾರಕ್ಕೆ ರಾಜ್ಯಪಾಲ ಹಾಗೂ ರಾಷ್ಟ್ರಪತಿಗೆ ಇರುವ ಸ್ವಾಯತ್ತತೆಯನ್ನು ಪ್ರತಿಪಾದಿಸಿದವು.

(ಲೈವ್‌ ಲಾ ಹಾಗೂ ಪಿಟಿಐ ವರದಿ ಆಧರಿಸಿದ ಬರೆದ ಸುದ್ದಿ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries