ಮೃತ ವ್ಯಕ್ತಿಯನ್ನು ತೆಲಂಗಾಣದ ಮೆಹಬೂಬ್ನಗರದ ನಿವಾಸಿ ಮೊಹಮ್ಮದ್ ನಿಜಾಮುದ್ದೀನ್ (30) ಎಂದು ಗುರುತಿಸಲಾಗಿದೆ.
ಆದರೆ ಮೃತನ ಕುಟುಂಬದವರು ಜನಾಂಗೀಯ ತಾರತಮ್ಯ ನಡೆದಿದೆ ಎಂದು ಆರೋಪಿಸಿದ್ದು, ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ನಿಜಾಮುದ್ದೀನ್ ತನ್ನ ರೂಮ್ಮೇಟ್ಗೆ ಚಾಕುವಿನಿಂದ ಇರಿದ ನಂತರ ಪೊಲೀಸರಿಗೆ ಕರೆ ಬಂದಿತ್ತು, ಪೊಲೀಸರು ಸ್ಥಳಕ್ಕೆ ಬಂದ ಸಮಯದಲ್ಲಿ ಇವರಿಬ್ಬರ ನಡುವೆ ವಾಗ್ವಾದ ನಡೆಯುತ್ತಿತ್ತು, ರೂಮ್ಮೇಟ್ ಹಲ್ಲೆಗೊಳಗಾಗಿ ಕೆಳಗೆ ಬಿದ್ದಿದ್ದ, ನಿಜಾಮುದ್ದೀನ್ ಕೈಯಲ್ಲಿ ಚಾಕು ಇತ್ತು, ಈ ವೇಳೆ ಪೊಲಿಸರು ಗುಂಡು ಹಾರಿಸಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ನಿಜಾಮುದ್ದೀನ್ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದರು. ಹಲ್ಲೆಗೆ ಒಳಗಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಜಾಮುದ್ದೀನ್ ಕಂಪ್ಯೂಟರ್ ಸೈನ್ಸ್ನಲ್ಲಿ ಮಾಸ್ಟರ್ಸ್ ಓದಿಕೊಂಡಿದ್ದರು. ಕ್ಯಾಲಿಫೋರ್ನಿಯಾದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಶಾಂತ ಸ್ವಭಾವದ ನಿಜಾಮುದ್ದೀನ್ ಧರ್ಮ ಆಧಾರಿತ ಭೇದಭಾವ, ವೇತನ ತಾರತಮ್ಯ ಸೇರಿದಂತೆ ಇಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ದೂರು ಸಲ್ಲಿಸಿದ್ದರು ಎಂದು ಅವರ ಕುಟುಂಬದವರು ಹೇಳಿದ್ದಾರೆ.




