HEALTH TIPS

2029ರ ವರೆಗೂ ನಾನೇ ಸಿಎಂ: ದೇವೇಂದ್ರ ಫಡಣವೀಸ್‌

ಮುಂಬೈ: '2029ರವರೆಗೂ ಮಹಾರಾಷ್ಟ್ರದಲ್ಲಿ ನಾನೇ ಮುಖ್ಯಮಂತ್ರಿ ಆಗಿರಲಿದ್ದೇನೆ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.

ಈ ಹೇಳಿಕೆ ಮೂಲಕ ಆಡಳಿತಾರೂಢ 'ಮಹಾಯುತಿ'ಯಲ್ಲಿ ಮೈತ್ರಿ ಪಕ್ಷಗಳಾಗಿರುವ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿಗೆ ಅಧಿಕಾರ ಹಸ್ತಾಂತರ ಸಾಧ್ಯವಿಲ್ಲ ಎಂಬ ಸಂದೇಶವನ್ನು ಫಡಣವೀಸ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಷ್ಟ್ರ ರಾಜಕಾರಣಕ್ಕೆ ಫಡಣವೀಸ್ ಪದಾರ್ಪಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, 'ಪಕ್ಷದ ಬಗ್ಗೆ ನಾನು ತಿಳಿದಿರುವಂತೆ ಆ ವಿಚಾರ ಇನ್ನೂ ದೂರದಲ್ಲಿದೆ. ಸದ್ಯಕ್ಕೆ 2029ರವರೆಗೂ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯಲಿದ್ದೇನೆ' ಎಂದಿದ್ದಾರೆ.

ಫಡಣವೀಸ್ ಹೇಳಿಕೆ ಬಗ್ಗೆ ‍ಪ್ರತಿಪಕ್ಷಗಳ ಒಕ್ಕೂಟವಾಗಿರುವ ಮಹಾ ವಿಕಾಸ ಅಘಾಡಿ ನಾಯಕರು ಕೂಡ ಟೀಕೆಗಳನ್ನು ಮಾಡಿದ್ದಾರೆ.

'ಏಕನಾಥ ಶಿಂಧೆ ಸಾಹೇಬರೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಾಗದೇ ಪರೋಕ್ಷವಾಗಿ ಅವರಿಗೆ ವಿಚಾರ ಮುಟ್ಟಿಸಲು ಫಡಣವೀಸ್ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡದಲ್ಲಿ ಆದಂತೆ ಕೇಂದ್ರದ ಒತ್ತಡಕ್ಕೆ ಮಣಿದು ತಾನು ತನ್ನ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೂ ಈ ಹೇಳಿಕೆ ಮೂಲಕವೇ ಸಂದೇಶ ನೀಡಿದ್ದಾರೆ' ಎಂದು ಕಾಂಗ್ರೆಸ್‌ನ ಹಿರಿಯ ವಕ್ತಾರ ಸಚಿನ್‌ ಸಾವಂತ್‌ ಹೇಳಿದ್ದಾರೆ.

ಫಡಣವೀಸ್ ಅವರು ತಮ್ಮ ಇಬ್ಬರು ಉಪಮುಖ್ಯಮಂತ್ರಿಗಳಿಗೆ ಸಂದೇಶ ನೀಡಲು ಈ ಹೇಳಿಕೆ ನೀಡಿದ್ದಾರೆಯೇ ಎನ್ನುವುದನ್ನು ತಿಳಿಯಬೇಕಿದೆ ಎಂದು ಎನ್‌ಸಿಪಿ (ಎಸ್‌ಪಿ) ವಕ್ತಾರ ಕ್ಲೈಡ್‌ ಕ್ಯಾಸ್ಟ್ರೋ ಕೂಡ ಪ್ರತಿಕ್ರಿಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries