ಮುಳ್ಳೇರಿಯ: ನಾಡು-ನುಡಿಗೆ ಬಹುಮುಖ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ವಿಶಿಷ್ಟ ಸಾಧಕರ ಜೀವನಾದರ್ಶ, ಬದುಕಿನ ಪಥಗಳು ಹೊಸ ತಲೆಮಾರಿಗೆ ಮಾರ್ಗದರ್ಶಕವೂ, ಪ್ರೇರಣದಾಯಿಯಾಗಿರುತ್ತದೆ. ಅವನ್ನು ಪರಿಚಯಿಸುವ ಹೊತ್ತಗೆ ತರುವುದು ಸಮಾಜಕ್ಕೆ ನಾವು ನೀಡುವ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದ್ದು, ಬೆಂಬಲ ಅಗತ್ಯ ಎಂದು ಹಿರಿಯ ಲೇಖಕ, ಪತ್ರಕರ್ತ, ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆ ತಿಳಿಸಿದರು.
ದೇಲಂಪಾಡಿಯ ಕೀರಿಕ್ಕಾಡು ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾ ಭವನದಲ್ಲಿ ಶನಿವಾರ ಹಿರಿಯ ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಅವರು ಬರೆದು ಪ್ರಕಟಿಸಿದ ಕನ್ನಡಿಯಲ್ಲಿ ಕನ್ನಡಿಗ ಕೃತಿಯ ಐದನೇ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಡಾ.ಬನಾರಿ ಅವರು ಕೈಗೆತ್ತಿಕೊಂಡಿರುವ ಅಧ್ಯಯನಶೀಲ ಇಂತಹ ಕೃತಿ ಸಂಪುಟಗಳು ನಾಡಿನ ಆಸ್ತಿಯಾಗಿದ್ದು, ಮಣ್ಣಿನ ಸಾಧನಾ ಪುರುಷರ ಮಾಹಿತಿಗಳು ಏಕ ಗವಾಕ್ಷಿಯಲ್ಲಿ ಲಭ್ಯವಾಗುವುದು ವಿಶೇಷವಾಗಿದೆ ಎಂದವರು ತಿಳಿಸಿದರು.
ಕೃತಿಕಾರ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೃತಿ ಸಂಪಾದಕಿ, ನಿವೃತ್ತ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ ಅವರು ಉಪಸ್ಥಿತರಿದ್ದು ಕೃತಿಯ ಬಗ್ಗೆ ಮಾತನಾಡಿದರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ವಸಂತಕುಮಾರ ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ವ್ಯಕ್ತಿಗಳು ಶಕ್ತಿಗಳಾಗಿ ರೂಪುಗೊಳ್ಳುವ, ಬದುಕನ್ನು ಸಮಾಜದ ವಿವಿಧ ಮುಖಗಳಿಗೆ ತೆರೆಸಿಕೊಳ್ಳುವ ಋಷಿ ಸದೃಶ ಬದುಕುಗಳತ್ತ ಇಣುಕು ನೋಟ ನಮ್ಮಲ್ಲೂ ಬದಲಾವಣೆಗಳಿಗೆ ಕಾರಣವಾಗಬಲ್ಲದು. ಅಂತಹದೊಂದು ಸಾಧ್ಯತೆಗಳಿಗೆ ಈ ಕೃತಿ ಬೆಳಕು ತೋರುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ ಸ್ವಾಗತಿಸಿ, ಪತ್ರಕರ್ತ ಚಂದ್ರಶೇಖರ ಏತಡ್ಕ ವಂದಿಸಿದರು. ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಬೆಳಿಗ್ಗೆ ಗಣಹೋಮ, ಶ್ರೀಗೋಪಾಲಕೃಷ್ಣ ದೇವರ ಪೂಜೆ, ಶ್ರೀಮದ್ಭಗವದ್ಗೀತಾ ಪಾರಾಯಣ, ಕುಣಿತ ಭಜನೆ, ಯಕ್ಷಗಾನ ಗಾನಾರ್ಚನೆ, ಅಂಗನವಾಡಿ ಪುಟಾಣಿಗಳಿಂದ ನೃತ್ಯಾರ್ಚನೆ ನಡೆಯಿತು. ಸುಕೇಶ್ ಸುಳ್ಯ ನಿರ್ವಹಿಸಿದರು.

.jpg)
.jpg)
.jpg)
