ಕಾಸರಗೋಡು: ಜಿಲ್ಲೆಯಲ್ಲಿ ಮೊದಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತಿರುವುದಾಗಿ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಖಾತೆ ಸಚಿವ ಡಾ.ಆರ್.ಬಿಂದು ಮಾಹಿತಿ ನೀಡಿದ್ದಾರೆ. ಚೆರುವತ್ತೂರಿನ ಸರ್ಕಾರಿ ತಾಂತ್ರಿಕ ಪ್ರೌಢಶಾಲೆಯ ಆವರಣದಲ್ಲಿ ಕಾಲೇಜು ಆರಂಭವಾಗಲಿದ್ದು, ಕಣ್ಣೂರು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ಸಚಿವೆ ತಿಳಿಸಿದರು.
ತ್ರಿಕ್ಕರಿಪುರ ಶಾಸಕ ಎಂ. ರಾಜಗೋಪಾಲನ್ ಅವರ ಉಪಸ್ಥಿತಿಯಲ್ಲಿ ತಿರುವನಂತಪುರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಯಿತು. ಕಾಸರಗೋಡು ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಮತ್ತು ಶೈಕ್ಷಣಿಕವಾಗಿ ಪ್ರತಿಭಾನ್ವಿತರಾಗಿರುವ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಸ್ವಾಮ್ಯದ ಇಂಜಿನಿಯರಿಂಗ್ ಕಾಲೇಜು ಅಗತ್ಯವಿದೆ. ಚೆರುವತ್ತೂರಿನ ಸರ್ಕಾರಿ ತಾಂತ್ರಿಕ ಪ್ರೌಢಶಾಲಾ ವಠಾರದಲ್ಲಿ ಹೊಸ ಪೀಳಿಗೆಯ ಕೋರ್ಸ್ಗಳು ಸೇರಿದಂತೆ ಬಿ.ಟೆಕ್ ಕೋರ್ಸ್ಗಳನ್ನು ಪ್ರಾರಂಭಿಸುವ ಶಿಫಾರಸನ್ನು ಉನ್ನತ ಶಿಕ್ಷಣ ಇಲಾಖೆ ಪರಿಶೀಲಿಸುತ್ತಿದೆ. ಇದಕ್ಕಾಗಿ ರಾಜ್ಯ ಬಜೆಟ್ನಲ್ಲಿ ನಿಗದಿಪಡಿಸಿದ ಮೊತ್ತ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸಯನ್ಸ್, ರೊಬೊಟಿಕ್ಸ್ ಕೋರ್ಸ್ಗಳನ್ನು ಪ್ರಾರಂಭಿಸಲಾಗುವುದು. ಕೋರ್ಸ್ಗಳನ್ನು ಪ್ರಾರಂಭಿಸಲು ಎಐಸಿಟಿಇ ಯ ಅನುಮತಿ ಪಡೆಯಲು ಅಗತ್ಯ ಮೂಲಸೌಕರ್ಯ ಸಕಾಲಿಕವಾಗಿ ಜಾರಿಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ನೋಡಲ್ ಅಧಿಕಾರಿಗೆ ವಹಿಸಲಾಗಿದೆ.ತಾಂತ್ರಿಕ ಪ್ರೌಢಶಾಲಾ ಕಟ್ಟಡದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ ಪ್ರಸಕ್ತ ಪ್ರಸ್ತಾಪಿಸಲಾದ ಕೋರ್ಸ್ಗಳನ್ನು ತಕ್ಷಣ ಪ್ರಾರಂಭಿಸುವ ಯೋಜನೆಯಿರಿಸಿಕೊಳ್ಳಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಿಂದ ಇದಕ್ಕಾಗಿ ಹಣವನ್ನು ಲಭ್ಯವಾಗುವಂತೆ ಮಾಡುವ ಬಗ್ಗೆಯೂ ಶಾಸಕರ ಜತೆ ಚರ್ಚಿಸುವುದಾಗಿ ಸಚಿವೆ ಡಾ. ಬಿಂದು ಹೇಳಿದರು.


