ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಜನರು ಕಳ್ಳನೆಂದು ಭಾವಿಸಿ, ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣ ಅಕ್ಟೋಬರ್ 2ರಂದು ವರದಿಯಾಗಿತ್ತು. ಇದೀಗ (ಶುಕ್ರವಾರ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೃತ ವ್ಯಕ್ತಿಯ ಕುಟುಂಬದವರನ್ನು (ಶುಕ್ರವಾರ) ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.ಬಳಿಕ ಮಾತನಾಡಿದ ರಾಹುಲ್, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ನನ್ನನ್ನು ಭೇಟಿಯಾಗದಂತೆ ಕುಟುಂಬದವರಿಗೆ ಸರ್ಕಾರವು ಇಂದು ಬೆಳಿಗ್ಗೆ ಬೆದರಿಕೆಯೊಡ್ಡಿದೆ. ಸಂತ್ರಸ್ತ ಕುಟುಂಬದವರು ನನ್ನನ್ನು ಭೇಟಿಯಾಗುವರೇ? ಅಥವಾ ಇಲ್ಲವೇ? ಎಂಬುದು ಮುಖ್ಯವಲ್ಲ. ಅವರೆಲ್ಲ ಅಪರಾಧಿಗಳಲ್ಲ ಎನ್ನುವುದು ಮುಖ್ಯ. ಅವರು ಯಾವುದೇ ತಪ್ಪು ಮಾಡಿಲ್ಲ' ಎಂದು ಹೇಳಿದ್ದಾರೆ.
ಮುಂದುವರಿದು, ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಕಾಂಗ್ರೆಸ್ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ.
'ದೇಶದಲ್ಲಿ ದಲಿತರ ವಿರುದ್ಧ ಯಾವುದೇ ರೀತಿಯ ದೌರ್ಜನ್ಯಗಳು ನಡೆದರೂ, ಕಾಂಗ್ರೆಸ್ ಪಕ್ಷ ಅವರ ನೆರವಿಗೆ ನಿಲ್ಲಲಿದೆ. ನಾವು ಸಾಧ್ಯವಿರುವ ಎಲ್ಲ ನೆರವು ನೀಡುತ್ತೇವೆ. ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ' ಎಂದು ಒತ್ತಿ ಹೇಳಿದ್ದಾರೆ.
ದಲಿತ ವ್ಯಕ್ತಿಯ ಹತ್ಯೆ ಪ್ರಕರಣ ವರದಿಯಾಗುತ್ತಿದ್ದಂತೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ, ಸರ್ಕಾರವು ದಲಿತರನ್ನು ರಕ್ಷಿಸಲು ಮತ್ತು ಗಲಭೆಯನ್ನು ಹತ್ತಿಕ್ಕಲು ವಿಫಲವಾಗಿದೆ ಎಂದು ಆರೋಪಿಸಿವೆ.
ಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈವರೆಗೆ 14 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಪ್ರಮುಖ ಆರೋಪಿಯೊಬ್ಬನನ್ನು ಅಕ್ಟೋಬರ್ 10ರಂದು ಗುಂಡಿಕ್ಕಿ ಬಂಧಿಸಲಾಗಿದೆ.
ಪ್ರಕರಣ ನಿರ್ವಹಿಸುವುದರಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಇಬ್ಬರು ಸಬ್ ಇನ್ಸ್ಟೆಕ್ಟರ್ ಮತ್ತು ಐವರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ.ಮೃತ ವ್ಯಕ್ತಿಯನ್ನು ಫತೇಪುರ ಜಿಲ್ಲೆಯ ಹರಿ ಓಂ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಕಳ್ಳರ ಗುಂಪೊಂದು ಓಡಾಡುತ್ತಿದೆ ಎಂಬ ವದಂತಿ ಹಬ್ಬಿದ್ದರಿಂದ ಉಂಚಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಹಲವು ಗ್ರಾಮಗಳ ಜನರು ರಾತ್ರಿ ವೇಳೆ ಕಟ್ಟೆಚ್ಚರ ವಹಿಸಿದ್ದರು. ಅಕ್ಟೋಬರ್ 2ರಂದು, ಹರಿ ಓಂ ಅವರು ಜಮುನಾಪುರ ಸೈಲ್ವೆ ಕ್ರಾಸಿಂಗ್ ಬಳಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡ ಕೆಲವರು, ಕಳ್ಳನೆಂದು ಶಂಕಿಸಿ ಅವರನ್ನು ತಡೆದು ಪ್ರಶ್ನಿಸಲಾರಂಭಿಸಿದ್ದರು. ಅದೇ ವೇಳೆ ತೀವ್ರವಾಗಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

