ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ಸ್ವಚ್ಛತಾ ಅಭಿಯಾನದಲ್ಲಿ ಗುಜರಿ ಮತ್ತು ಇ-ತ್ಯಾಜ್ಯ ವಿಲೇವಾರಿಯಿಂದ ಕೇಂದ್ರ ಸರ್ಕಾರಕ್ಕೆ ₹550 ಕೋಟಿ ವರಮಾನ ಬಂದಿದೆ.
ಸರ್ಕಾರಿ ಕಚೇರಿಗಳಲ್ಲಿನ ಗುಜರಿ ವಸ್ತುಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ 'ಸ್ವಚ್ಛತಾ ಅಭಿಯಾನ 5.0' ಹಮ್ಮಿಕೊಳ್ಳಲಾಗಿತ್ತು.
ಗಾಂಧಿ ಜಯಂತಿಯಂದು ಆರಂಭಗೊಂಡ ಈ ಅಭಿಯಾನವು ಅ.31ರವರೆಗೆ ನಡೆದಿತ್ತು.
ಈ ಅಭಿಯಾನದಡಿ 7 ಲಕ್ಷದಷ್ಟು ಸ್ವಚ್ಛತಾ ಶಿಬಿರಗಳು ನಡೆದಿದ್ದು, ಶೇ 97ರಷ್ಟು ಗುರಿ ತಲುಪಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಗುಜರಿ ಮುಕ್ತಗೊಳಿಸಿದ ನಂತರ ಸುಮಾರು 202.97 ಲಕ್ಷ ಚದರ ಅಡಿಯಷ್ಟು ಸ್ಥಳ ಬಳಕೆಗೆ ಮುಕ್ತವಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.




