ಮುಳ್ಳೇರಿಯ: ಪಾರಂಪರಿಕವಾಗಿ ನಮ್ಮ ಹಿರಿಯರು ಹಾಕಿಕೊಟ್ಟ ಅಳಿಯಕಟ್ಟು ಸಂಪ್ರದಾಯ, ವಿಧಿ ವಿಧಾನಗಳನ್ನು ಉಳಿಸಿ ಪಾಲಿಸಿಕೊಂಡು ಬರುವುದರ ಜತೆಗೆ ಬಂಟರ ಅಸ್ತಿತ್ವವನ್ನು ಉಳಿಸಿ ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ ಎಂದು ಕಾಸರಗೋಡು ವಲಯ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಂಗ ನಟ ರವೀಂದ್ರ ರೈ ಮಲ್ಲಾವರ ತಿಳಿಸಿದ್ದಾರೆ.
ಅವರು ನಾರಂಪಾಡಿ ಗುತ್ತಿನ ಮನೆಯಲ್ಲಿ ಜರುಗಿದ ಬಂಟರ ಸಂಘದ ಚೆಂಗಳ ಪಂಚಾಯಿತಿ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಬಂಟ ಸಮಾಜದ ಸಂಪ್ರದಾಯ ಆಚಾರ, ವಿಚಾರ, ವಿವಾಹ ವಿಧಿ ವಿಧಾನಗಳ ಕುರಿತು ವಿಶೇಷ ಭಾಷಣ ಮಾಡಿದರು.
ಸಂಜೀವ ರೈ ಬೀಜಂತಡ್ಕ ಅದ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ, ವಕೀಲ ಸದಾನಂದ ರೈ ಮಾತನಾಡಿ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರ್ಪಡೆ ಗೊಂಡ ಬಳಿಕ ಕಾಸರಗೋಡಿನ ಬಂಟ ಸಮಾಜ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಭಾಷಾ ಸಮಸ್ಯೆ ಜತೆಗೆ ಯುವ ಜನಾಂಗದ ಉದ್ಯೋಗ ಸಮಸ್ಯೆ ಕಾಡತೊಡಗಿದೆ. ಮೀಸಲಾತಿಯಿಂದಾಗಿ ಹೆಚ್ಚು ಸಂಕಷ್ಟಗಳನ್ನು ನಮ್ಮ ಸಮಾಜ ಎದುರಿಸಬೇಕಾಗಿಬಂದಿರುವುದಾಗಿ ತಿಳಿಸಿದರು. ನಾರಂಪಾಡಿ ಗುತ್ತು ಯಜಮಾನ ಬಾಲಕೃಷ್ಣ ರೈ, Áರಂಪಾಡಿ ಗುತ್ತಿನ ಅಧ್ಯಕ್ಷ ತ್ಯಾಂಪಣ್ಣ ಭಂಡಾರಿ ಸ ಉಪಸ್ಥಿತರಿದ್ದರು.
ಜ್ಯೋತಿ, ಸುಧಾಮಣಿ ಜಯಸಾಧನ, ಶಿಲ್ಪಾ, ಶ್ರೀಲತಾ ಪ್ರಾರ್ಥನೆ ಹಾಡಿದರು. ಈ ಸಂದರ್ಭ ಪಂಚಾಯಿತಿ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಜೀವ ರೈ ಬೀಜಂತಡ್ಕ ಅಧ್ಯಕ್ಷ, ಪ್ರಕಾಶ್ ರೈ ನೆಕ್ರಾಜೆ ಪ್ರಧಾನ ಕಾರ್ಯದರ್ಶಿ, ರತ್ನಾಕರ ಆಳ್ವ ಪುಂಡೂರು ಕೋಶಾಧಿಕಾರಿ, ಇತರ ಪದಾಧಿಕಾರಿಗಳು ಮತ್ತು ಕಾರ್ಯಕಾರಿಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.





