HEALTH TIPS

ಗಮಚಾ ಬೀಸಿ ಬಿಹಾರ ವಿಧಾನಸಭೆ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸಿದ ಮೋದಿ; ʻಗರ್ದಾ ಊಡಾ ದಿಯಾʼ ಎಂದು ಘೋಷಣೆ!

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ 2025ರಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಭೂತಪೂರ್ವ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಾರ್ಯಕರ್ತರ ಜಯಘೋಷಗಳು ಮತ್ತು ಹರ್ಷೋದ್ಗಾರಗಳ ನಡುವೆ ಅತ್ಯಂತ ಉತ್ಸಾಹದಿಂದ ಕಚೇರಿಗೆ ಆಗಮಿಸಿ ವಿಜಯೋತ್ಸವದಲ್ಲಿ ಪಾಲ್ಗೊಂಡರು.

ತಮ್ಮ ಕುತ್ತಿಗೆಗೆ ಶಾಲು ಹಾಕಿಕೊಂಡು, ಬಿಹಾರದ ಮಿಥಿಲಾ ಪ್ರದೇಶದ ಮಧುಬನಿ ಕಲೆಯನ್ನು ಹೊಂದಿದ್ದ ಸಾಂಪ್ರದಾಯಿಕ 'ಗಮಚಾ' (ಹೆಗಲ ಮೇಲೆ ಹಾಕುವ ಬಟ್ಟೆ) ವನ್ನು ಬೀಸುತ್ತಾ ಬಂದ ಪ್ರಧಾನಿ ಮೋದಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ "ಮೋದಿ, ಮೋದಿ" ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಪ್ರಧಾನಿ ಮೋದಿ ಅವರು 'ಗಮಚಾ'ವನ್ನು ಪದೇ ಪದೇ ಬೀಸುವ ಮೂಲಕ ಜನಸ್ತೋಮಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಐತಿಹಾಸಿಕ ವಿಜಯದ ಮಧ್ಯೆ, ಪ್ರಧಾನಿಯವರು "ಛಠಿ ಮೈಯ್ಯ" (ಛಠಿ ತಾಯಿ)ಯನ್ನು ಕೊಂಡಾಡಿದರು ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ರಾಜ್ಯದಲ್ಲಿ ವಿಭಜಕ ರಾಜಕಾರಣ ಮಾಡಿದ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. "ಜೈ ಛಠಿ ಮೈಯಾ, ಯೆ ಪ್ರಚಂಡ ಜೀತ್, ಅತೂಟ್ ವಿಶ್ವಾಸ್, ಬಿಹಾರ್ ಕೆ ಲೋಗೋ ನೆ ಬಿಲ್ಕುಲ್ ಗರ್ದಾ ಊಡಾ ದಿಯಾ ಹೈ," ಎಂದು ಅವರು ಜಯಘೋಷ ಮಾಡಿದರು.

"ಗರ್ದಾ ಊಡಾ ದಿಯಾ"; ಮೋದಿ ಘೋಷಣೆ

ಸಂಜೆ ಸುಮಾರು 7 ಗಂಟೆಗೆ ಬಿಜೆಪಿ ರಾಷ್ಟ್ರೀಯ ಕಚೇರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ದಕ್ಕಿದ ಭಾರಿ ವಿಜಯವನ್ನು "ಗರ್ದಾ ಊಡಾ ದಿಯಾ" (ಧೂಳನ್ನು ಉಡಾಯಿಸಿಬಿಟ್ಟರು/ಒಂದು ಭರ್ಜರಿ ವಿಜಯ) ಎಂಬ ಗ್ರಾಮ್ಯ ಶೈಲಿಯ ಅಭಿವ್ಯಕ್ತಿಯೊಂದಿಗೆ ಸಂಭ್ರಮಿಸಿದರು.

ಇದಕ್ಕೂ ಮುನ್ನ, ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಪೋಸ್ಟ್‌ ಮಾಡಿದ ಪ್ರಧಾನಿ ಮೋದಿ ಅವರು, ಜೆಡಿಯು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಎನ್‌ಡಿಎ ಮಹಾ ಗೆಲುವು ಸಾಧಿಸಿರುವುದನ್ನು "ಉತ್ತಮ ಆಡಳಿತದ ವಿಜಯ" ಎಂದು ಬಣ್ಣಿಸಿದರು. "ಅಭಿವೃದ್ಧಿಯ ಗೆಲುವು ಸಾಧಿಸಿದೆ. ಜನ ಕಲ್ಯಾಣದ ಭಾವನೆಯ ಗೆಲುವು ಸಾಧಿಸಿದೆ. ಸಾಮಾಜಿಕ ನ್ಯಾಯದ ಗೆಲುವು ಸಾಧಿಸಿದೆ," ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ ಬಣ್ಣಿಸಿದರು..

ಅವರು ಮುಂದುವರಿದು, "2025ರ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಮತ್ತು ಅಭೂತಪೂರ್ವ ವಿಜಯದೊಂದಿಗೆ ಎನ್‌ಡಿಎಗೆ ಆಶೀರ್ವದಿಸಿದ ಬಿಹಾರದ ಕುಟುಂಬ ಸದಸ್ಯರಿಗೆ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು. ಈ ಪ್ರಚಂಡ ಸಾರ್ವಜನಿಕ ಜನಾದೇಶವು ನಮಗೆ ಜನರಿಗೆ ಸೇವೆ ಸಲ್ಲಿಸಲು ಮತ್ತು ಬಿಹಾರಕ್ಕಾಗಿ ಹೊಸ ಸಂಕಲ್ಪದೊಂದಿಗೆ ಕೆಲಸ ಮಾಡಲು ಶಕ್ತಿ ನೀಡುತ್ತದೆ," ಎಂದರು.

ಮೈತ್ರಿಕೂಟದ ಮಿತ್ರರಿಗೆ ಅಭಿನಂದನೆ

ಪ್ರಧಾನಿಯವರು ತಮ್ಮ ಸರಣಿ ಪೋಸ್ಟ್‌ಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಎಲ್ಲಾ ಮಿತ್ರಪಕ್ಷಗಳಿಗೂ ಟ್ಯಾಗ್‌ ಮಾಡಿ ಧನ್ಯವಾದ ಸಲ್ಲಿಸದರು. "ಎನ್‌ಡಿಎ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಖಾತ್ರಿಪಡಿಸಿದೆ. ನಮ್ಮ ಕಾರ್ಯಕ್ಷಮತೆ ಮತ್ತು ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಮ್ಮ ದೃಷ್ಟಿಕೋನವನ್ನು ಕಂಡ ನಂತರ ಜನರು ನಮಗೆ ಅಗಾಧ ಬಹುಮತ ನೀಡಿದ್ದಾರೆ. ಈ ಭರ್ಜರಿ ಗೆಲುವಿಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೀ ಮತ್ತು ನಮ್ಮ ಎನ್‌ಡಿಎ ಕುಟುಂಬದ ಸಹೋದ್ಯೋಗಿಗಳಾದ ಚಿರಾಗ್ ಪಾಸ್ವಾನ್ ಜೀ, ಜಿತನ್ ರಾಮ್ ಮಾಂಝಿ ಜೀ ಮತ್ತು ಉಪೇಂದ್ರ ಕುಶ್ವಾಹ ಜೀ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು," ಎಂದು ತಿಳಿಸಿದರು.
ಎನ್‌ಡಿಎ ಮೈತ್ರಿಕೂಟವು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 200 ಸ್ಥಾನಗಳ ಗಡಿ ದಾಟಿ ಭರ್ಜರಿ ವಿಜಯವನ್ನು ದಾಖಲಿಸಿದೆ. ಅದೇ ಸಮಯದಲ್ಲಿ ವಿರೋಧ ಪಕ್ಷದ ಮಹಾಘಟಬಂಧನವು ನಿರಾಶಾದಾಯಕ ಪ್ರದರ್ಶನ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries