HEALTH TIPS

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿಯಿಂದ ಟಿಡಿಬಿ ಮಾಜಿ ಅಧ್ಯಕ್ಷನ ವಿಚಾರಣೆ

ತಿರುವನಂತಪುರ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್‌ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದೆ.


ಮಾಜಿ ಶಾಸಕರೂ ಆದ ಪದ್ಮಕುಮಾರ್‌ ಅವರನ್ನು ಬೆಳಿಗ್ಗೆಯಿಂದ ಅಪರಾಧ ವಿಭಾಗದ ಕಚೇರಿಯಲ್ಲಿ ವಿಚಾರಣೆ ನಡೆಸಲಾಯಿತು. ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳು ಮತ್ತು ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳನ್ನು ಚಿನ್ನ ಲೇಪನಕ್ಕಾಗಿ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೋಟಿ ಅವರಿಗೆ ಹಸ್ತಾಂತರಿಸುವ ಪ್ರಸ್ತಾವವನ್ನು ಮಂಡಳಿಯು ಪರಿಗಣಿಸಿದ್ದ 2019ರ ಸಂದರ್ಭದಲ್ಲಿ ಅವರು ಟಿಡಿಬಿ ಅಧ್ಯಕ್ಷರಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಚಿನ್ನ ಲೇಪಿತ ತಾಮ್ರದ ಕವಚಗಳನ್ನು ಪೋಟಿ ಅವರಿಗೆ ಹಸ್ತಾಂತರಿಸಿದಾಗ ತಾನು ಮಂಡಳಿಯ ಅಧ್ಯಕ್ಷನಾಗಿರಲಿಲ್ಲ ಎಂದು ಪದ್ಮಕುಮಾರ್‌ ವಾದಿಸುತ್ತಿದ್ದಾರೆ. ಆದರೆ, ಅವರ ಅಧಿಕಾರಾವಧಿಯಲ್ಲಿ ಈ ಪ್ರಸ್ತಾವವನ್ನು ಜಾರಿಗೊಳಿಸಲಾಗಿದೆ' ಎಂದು ಎಸ್‌ಐಟಿ ಹೇಳಿದೆ.

'ವಿಚಾರಣೆಗೆ ಹಾಜರಾಗುವಂತೆ ಪದ್ಮಕುಮಾರ್‌ ಅವರಿಗೆ ಈ ತಿಂಗಳು ಎರಡು ಬಾರಿ ಸೂಚಿಸಲಾಗಿತ್ತು. ಆದರೆ, ಅವರು ಹೆಚ್ಚಿನ ಸಮಯ ಕೋರಿದ್ದರು. ಇತ್ತೀಚೆಗೆ ಹೊಸ ನೋಟಿಸ್‌ ಜಾರಿಗೊಳಿಸುತ್ತಿದ್ದಂತೆ ಅವರು ವಿಚಾರಣೆಗೆ ಹಾಜರಾಗಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಪಿಐ(ಎಂ)ನ ಹಿರಿಯ ನಾಯಕರಾದ ಪದ್ಮಕುಮಾರ್‌ ವಿಧಾನಸಭಾ ಚುನಾವಣೆಯಲ್ಲಿ ಕೊನ್ನಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಎಸ್‌ಐಟಿ ಕಸ್ಟಡಿಗೆ ವಾಸು


ಪದ್ಮಕುಮಾರ್‌ ಅವರ ಬಳಿಕ ಟಿಡಿಬಿ ಅಧ್ಯಕ್ಷರಾಗಿದ್ದ ಎನ್. ವಾಸು ಅವರನ್ನು ಕೊಲ್ಲಂನ ನ್ಯಾಯಾಲಯ ಗುರುವಾರ ಸಂಜೆ 4ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿತು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಒಂದು ದಿನದ ಮಟ್ಟಿಗೆ ಕಸ್ಟಡಿಗೆ ನೀಡುವಂತೆ ಕೋರಿ ಎಸ್‌ಐಟಿ ನ್ಯಾಯಾಲಯದ ಮೊರೆ ಹೋಗಿತ್ತು.

ವಾಸು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರನ್ನು ನ್ಯಾಯಾಲಯದಿಂದ ಅಪರಾಧ ವಿಭಾಗದ ಕಚೇರಿಗೆ ಕರೆದೊಯ್ಯುತ್ತಿದ್ದ ವಾಹನವನ್ನು ತಡೆಯಲು ಪ್ರಯತ್ನಿಸಿದರು. ದ್ವಾರಪಾಲಕ ಮೂರ್ತಿಗಳು ಮತ್ತು ಶ್ರೀಕೋವಿಲ್‌ ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಳವಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳಾದ ಪೋಟಿ ಮತ್ತು ವಾಸು ಸೇರಿದಂತೆ ಐವರನ್ನು ಈವರೆಗೆ ಎಸ್‌ಐಟಿ ಬಂಧಿಸಿದೆ.














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries