ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತವು, ಹಿಂದೂ ವ್ಯಕ್ತಿಯ ಹತ್ಯೆಯಲ್ಲಿ ಭಾಗಿಯಾದ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.
ಬಾಂಗ್ಲಾದೇಶದ ನ್ಯಾಷನಲಿಸ್ಟ್ ಪಕ್ಷದ (ಬಿಎನ್ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ 17 ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ್ದು, ಅಲ್ಲಿ ಹೊಸ ರಾಜಕೀಯ ಸ್ಥಿತ್ಯಂತರಕ್ಕೆ ವೇದಿಕೆ ಸಿದ್ಧಗೊಂಡಿರುವ ಬೆನ್ನಲ್ಲೇ, ಭಾರತ ಈ ಪ್ರತಿಕ್ರಿಯೆ ನೀಡಿದೆ.
'ಬಾಂಗ್ಲಾದೇಶದಲ್ಲಿ 2026ರ ಫೆಬ್ರುವರಿ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯು ಮುಕ್ತವಾಗಿ, ನ್ಯಾಯಯುತವಾಗಿ ಮತ್ತು ಎಲ್ಲರನ್ನೂ ಒಳಗೊಂಡು ನಡೆಯಬೇಕು. ಈಗಿನ ರಾಜಕೀಯ ಅಸ್ಥಿರತೆ ಕೊನೆಗಾಣಿಸಿ ಬಾಂಗ್ಲಾದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿರಗೊಳ್ಳುವಂತೆ ಮಾಡುವುದು ಅಲ್ಲಿನ ಸರ್ಕಾರದ ಜವಾಬ್ದಾರಿ' ಎಂದು ಭಾರತ ಹೇಳಿದೆ.
'ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹಿಂದೂಗಳು, ಕ್ರೈಸ್ತರು, ಬೌದ್ಧರನ್ನು ಒಳಗೊಂಡು
ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಇದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಜತೆಗೆ ಅಲ್ಲಿನ ರಾಜಕೀಯ ಬಿಕ್ಕಟ್ಟಿನ ಮೇಲೂ ನಿರಂತರವಾಗಿ ನಿಗಾ ವಹಿಸುತ್ತಿದೆ' ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
'ಬಾಂಗ್ಲಾದೇಶದ ಮೈಮೆನ್ಸಿಂಗ್ನಲ್ಲಿ ಇತ್ತೀಚೆಗೆ ನಡೆದ ಹಿಂದೂ ಯುವಕ ದೀಪು ಚಂದ್ರದಾಸ್ ಅವರ ಭೀಕರ ಹತ್ಯೆಯನ್ನು ಖಂಡಿಸಿರುವ ಜೈಸ್ವಾಲ್, 'ಈ ಕೃತ್ಯದಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಹೇಳಿದೆ.
ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ವಿರುದ್ಧ ನಡೆದ ಹೋರಾಟದಲ್ಲಿ ಶರೀಫ್ ಉಸ್ಮಾನ್ ಹಾದಿ (32) ಹತ್ಯೆಯಾದ ಬೆನ್ನಲ್ಲೇ, ಬಾಂಗ್ಲಾದಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಶರೀಫ್ ಹತ್ಯೆಗೆ ಸಂಬಂಧಿಸಿದಂತೆ ಭಾರತಕ್ಕೆ ಸಂಬಂಧ ಕಲ್ಪಿಸುವುದನ್ನು
ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. ಬಾಂಗ್ಲಾ ವಿಷಯದಲ್ಲಿ ಭಾರತದ ಬಗೆಗಿನ ಸುಳ್ಳು ನಿರೂಪಣೆಗಳನ್ನು ನಿರಾಕರಿಸುವುದಾಗಿ ಜೈಸ್ವಾಲ್ ಹೇಳಿದ್ದಾರೆ
ತಂದೆಯ ಸಮಾಧಿಗೆ ತಾರಿಕ್ ನಮನ
ಢಾಕಾ/ನವದೆಹಲಿ: ಸ್ವದೇಶಕ್ಕೆ ಮರಳಿರುವ ಬಾಂಗ್ಲಾದೇಶದ 'ಬಿಎನ್ಪಿ ಪಕ್ಷದ ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್, ಶುಕ್ರವಾರ ತಮ್ಮ ತಂದೆ, ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿ ಸ್ಥಳಕ್ಕೆ ಹಲವು ವರ್ಷಗಳ ಬಳಿಕ ಭೇಟಿ ನೀಡಿ, ನಮನ ಸಲ್ಲಿಸಿದರು.
ರೆಹಮಾನ್ ಅವರು, ಜಿಯಾವುರ್ ರೆಹಮಾನ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಬಿಎನ್ಪಿ ಕಾರ್ಯಕರ್ತರು ರಸ್ತೆಯ ಎರಡೂ ಬದಿಗಳಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಕಾರ್ಯಕರ್ತರ ದಟ್ಟಣೆಯಿಂದಾಗಿ ತಾರಿಕ್ ನಿವಾಸದಿಂದ, ಸಮಾಧಿ ಇರುವ ಜಿಯಾ ಉದ್ಯಾನದ 8 ಕಿ.ಮೀ ದಾರಿ ಕ್ರಮಿಸಲು 1 ಗಂಟೆ, 51 ನಿಮಿಷ ಬೇಕಾಯಿತು. ಬೆಂಬಲಿಗರು ಘೋಷಣೆಗಳನ್ನು ಕೂಗಿದರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಹೆಚ್ಚುವರಿ ಭದ್ರತೆ ಕೈಗೊಳ್ಳಲಾಗಿತ್ತು.
ದಿನದ ಬೆಳವಣಿಗೆ
ಟ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಕೋಲ್ಕತ್ತ, ವಾರಾಣಸಿ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ
ಟ ಸಿಲಿಗುರಿ ಸುತ್ತಮುತ್ತ ಬಾಂಗ್ಲಾ ಪ್ರಜೆಗಳಿಗೆ ವಸತಿ ಸೌಕರ್ಯ ತಾತ್ಕಾಲಿಕವಾಗಿ ನಿಲ್ಲಿಸಲು ಪಶ್ಚಿಮ ಬಂಗಾಳದ ಹೋಟೆಲ್ ಉದ್ಯಮಿಗಳ ಸಂಘ ನಿರ್ಧಾರ
ಟ ಶರೀಫ್ ಉಸ್ಮಾನ್ ಹಾದಿ ಹತ್ಯೆ ಖಂಡಿಸಿ ಢಾಕಾದಲ್ಲಿ ಬೃಹತ್ ಪ್ರತಿಭಟನೆ
ರಣಧೀರ್ ಜೈಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ರಾಜಕೀಯ ಹಿಂಸಾಚಾರ ಅಥವಾ ಮಾಧ್ಯಮಗಳ ಉತ್ಪ್ರೇಕ್ಷೆ ಎಂದು ತಳ್ಳಿ ಹಾಕುವಂತಿಲ್ಲ

