HEALTH TIPS

ಧನಕರ್‌ ಹಠಾತ್‌ ನಿರ್ಗಮನ ಪ್ರಸ್ತಾಪಿಸಿದ ಖರ್ಗೆ

ನವದೆಹಲಿ: ಸೋಮವಾರದಿಂದ ಆರಂಭಗೊಂಡ ಚಳಿಗಾಲದ ಅಧಿವೇಶನದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಸ್ವಾಗತಿಸುವ ವೇಳೆ ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರ ಹಠಾತ್‌ ನಿರ್ಗಮನವನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದರು.

ಇದಕ್ಕೆ ಆಡಳಿತ ಪಕ್ಷದ ಮುಂದಿನ ಸಾಲಿನಲ್ಲಿ ಕೂತಿದ್ದ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಈ ಸಂದರ್ಭಕ್ಕೆ ಔಚಿತ್ಯಪೂರ್ಣವಾದ ಮಾತಲ್ಲ ಎಂದು ನೆನಪಿಸಿದರು.

ವಿರೋಧ ಪಕ್ಷಗಳ ಪರವಾಗಿ ರಾಧಾಕೃಷ್ಣನ್‌ ಅವರನ್ನು ಸ್ವಾಗತಿಸಿದ ಖರ್ಗೆ, ಪ್ರಧಾನಿ ಮೋದಿ ಅವರ ಹೇಳಿಕೆಯ ನಂತರ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.

'ಸಾಂವಿಧಾನಿಕ ಮೌಲ್ಯಗಳು ಹಾಗೂ ಸಂಸತ್‌ನ ಸಂಪ್ರದಾಯಗಳನ್ನು ಕಾಂಗ್ರೆಸ್‌ ಪಕ್ಷವು ಸದಾ ಗೌರವಿಸುತ್ತದೆ. ಸುಗಮ ಕಲಾಪ ನಡೆಸಲು ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ದೊರಕಲಿದೆ' ಎಂದು ಅವರು ತಿಳಿಸಿದರು.

ಅನಾರೋಗ್ಯದ ಕಾರಣ ನೀಡಿ ಜುಲೈ 21ರಂದು ಧನಕರ್‌ ಅವರು ಹಠಾತ್‌ ನಿರ್ಗಮಿಸಿದ್ದನ್ನು ಪ್ರಸ್ತಾಪಿಸಿದರು.

'ರಾಜ್ಯಸಭೆಯ ಹಿಂದಿನ ಅಧ್ಯಕ್ಷರು ಅನಿರೀಕ್ಷಿತ ಹಾಗೂ ಹಠಾತ್‌ ಆಗಿ ನಿರ್ಗಮಿಸುವ ಮೂಲಕ ಸಂಸತ್‌ನ ಇತಿಹಾಸದಲ್ಲಿ ಅಭೂತಪೂರ್ವ ದಾಖಲೆಗೆ ಕಾರಣರಾದರು. ರಾಜ್ಯಸಭೆಯ ಅಧ್ಯಕ್ಷರು ಸದನದ ಮೇಲ್ವಿಚಾರಕರಾಗಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳಿಗೂ ಸೇರಿದವರಾಗಿದ್ದಾರೆ' ಎಂದು ತಿಳಿಸಿದರು.

'ಈ ಸದನಕ್ಕೆ ಅವರನ್ನು ಬೀಳ್ಕೊಡಲು ಸಾಧ್ಯವಾಗಲಿಲ್ಲ ಎಂಬುದು ನನಗೆ ಬೇಸರವಾಗಿದೆ. ಕಾಂಗ್ರೆಸ್‌ನಿಂದ ಮೂರು ಬಾರಿ ಸಂಸದರಾಗಿದ್ದ ಸಿ.ಕೆ.ಕುಪ್ಪುಸ್ವಾಮಿ ಅವರು ರಾಧಾಕೃಷ್ಣನ್‌ ಸಂಬಂಧಿ' ಎಂದು ಖರ್ಗೆ ಪ್ರಸ್ತಾಪಿಸಿದರು.

'ನೀವು ಎರಡೂ ಕಡೆ ಸರಿದೂಗಿಸಿಕೊಂಡು ಹೋಗುವುದು ಉತ್ತಮ. ನಿಮ್ಮ ಅವಧಿಯಲ್ಲಿ ಯಶಸ್ಸು ಸಿಗಲಿ. ನೀವು ಮಾತನಾಡುವ ವೇಳೆ ಪ್ರಧಾನಿ (ನರೇಂದ್ರ ಮೋದಿ) ಹೆಸರನ್ನು ಉಲ್ಲೇಖಿಸಿದ್ದೀರಿ. ಆದರೆ, ನೀವು ಕಾಂಗ್ರೆಸ್‌ ಕುಟುಂಬದಿಂದ ಬಂದಿದ್ದೀರಿ ಎಂಬುದನ್ನು ಮರೆಯಬೇಡಿ' ಎಂದರು.

'ಸಂಸತ್‌ನ ಹೊರಭಾಗದಲ್ಲಿ ಪ್ರಧಾನಿ ಅವರು ಹೇಳಿಕೆ ನೀಡಿದರು. ಒಳಗಡೆ ಪರೋಕ್ಷವಾಗಿ ಟೀಕಿಸಿದರು. ನಾವು ಇಲ್ಲಿಯೇ ಉತ್ತರ ನೀಡುತ್ತೇವೆ' ಎಂದು ಖರ್ಗೆ ಅವರು ಸ್ವಾಗತ ಭಾಷಣದಲ್ಲಿ ಪ್ರಸ್ತಾಪಿಸಿದರು.

ಆಕ್ಷೇಪ: ಖರ್ಗೆ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, 'ಇದು ಗಂಭೀರವಾದ ಸಂದರ್ಭವಾಗಿದೆ. ಸ್ವಾಗತ ಕೋರುವ ವೇಳೆ ಪ್ರಧಾನಿ ಅವರು ಅತ್ಯಂತ ಗೌರವಯುತವಾಗಿ ಮಾತನಾಡಿದ್ದಾರೆ. ಆದರೆ, ಗೌರವಾನ್ವಿತ ವಿರೋಧ ಪಕ್ಷದ ನಾಯಕರು ಅನಗತ್ಯ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ' ಎಂದು ತಿಳಿಸಿದರು.

'ಮಾಜಿ ಉಪರಾಷ್ಟ್ರಪತಿ ಬಗ್ಗೆ ನೀವು ಸಲ್ಲದ ಭಾಷೆ ಬಳಸುವ ಮೂಲಕ ಅವರನ್ನು ಅವಮಾನಿಸಿದ್ದೀರಿ. ನೀವು ಸಲ್ಲಿಸಿದ ಪ್ರಸ್ತಾವನೆಯ ಪ್ರತಿ ಈಗಲೂ ನಮ್ಮ ಬಳಿಯಿದೆ' ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಮಾತನಾಡಿದ ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಜೆ.ಪಿ.ನಡ್ಡಾ, 'ಈ ಸಂದರ್ಭದ ಘನತೆಯನ್ನು ಪ್ರತಿಯೊಬ್ಬ ಸದಸ್ಯರು ಕಾಪಾಡಿಕೊಳ್ಳಬೇಕು. ಇತ್ತೀಚಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ಮುಖಭಂಗ ಅನುಭವಿಸಿವೆ' ಎಂದು ಪ್ರಸ್ತಾಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries