ನವದೆಹಲಿ: ತೆಲಂಗಾಣದಲ್ಲಿ ಭಾರಿ ಸದ್ದು ಮಾಡಿರುವ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ, ಇದೇ ಶುಕ್ರವಾರ (ಡಿ.12) ಬೆಳಿಗ್ಗೆ 11ರೊಳಗೆ ಪೊಲೀಸರ ಮುಂದೆ ಶರಣಾಗುವಂತೆ ವಿಶೇಷ ಗುಪ್ತಚರ ಬ್ಯುರೊ(ಎಸ್ಐಬಿ) ಮಾಜಿ ಮುಖ್ಯಸ್ಥ ಟಿ.ಪ್ರಭಾಕರ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶಿಸಿದೆ.
'ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ, ತನಿಖಾಧಿಕಾರಿ ಮುಂದೆ ಶುಕ್ರವಾರ ಬೆಳಿಗ್ಗೆ 11ರ ಹೊತ್ತಿಗೆ ಅರ್ಜಿದಾರ (ಟಿ.ಪ್ರಭಾಕರ ರಾವ್) ಶರಣಾಗಬೇಕು. ಕಾಯ್ದೆ ಅನುಸಾರವೇ ಅವರನ್ನು ವಿಚಾರಣೆಗೆ ಒಳಪಡಿಸಬೇಕು' ಎಂದು ಹೇಳಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಆರ್.ಮಹದೇವನ್ ಅವರು ಇದ್ದ ಪೀಠ, ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿತು.
'ರಾವ್ ಎಸಗಿದ್ದಾರೆ ಎನ್ನಲಾದ ಅಪರಾಧಗಳ ಕುರಿತು ಹೆಚ್ಚಿನ ತನಿಖೆ ಅಗತ್ಯ ಇದೆ. ಹೀಗಾಗಿ, ಈ ಆದೇಶ ಹೊರಡಿಸಲಾಗಿದೆ' ಎಂದು ಪೀಠ ಹೇಳಿದೆ.
ಈ ಹಿಂದಿನ ಬಿಆರ್ಎಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ, ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಜೊತೆಗೆ, ಹಲವಾರು ಎಲೆಕ್ಟ್ರಾನಿಕ್ ಸಾಧನಗಳಲ್ಲಿನ ಗುಪ್ತಚರ ಮಾಹಿತಿಯನ್ನು ಅಳಿಸಿ ಹಾಕಲಾಗಿದೆ ಎಂಬ ಆರೋಪದಡಿ, ಎಸ್ಐಬಿಯ ಡಿಎಸ್ಪಿ ಆಗಿದ್ದ ಪ್ರಭಾಕರ ರಾವ್ ಸೇರಿ ನಾಲ್ವರನ್ನು ಹೈದರಾಬಾದ್ ಪೊಲೀಸರು ಕಳೆದ ವರ್ಷ ಮಾರ್ಚ್ನಲ್ಲಿ ಬಂಧಿಸಿದ್ದರು.
ರಾವ್ ಅವರಿಗೆ ಮಧ್ಯಂತರ ರಕ್ಷಣೆ ನೀಡಿ, ಸುಪ್ರೀಂ ಕೋರ್ಟ್ ಮೇ 29ರಂದು ಆದೇಶಿಸಿತ್ತು.

