ನವದೆಹಲಿ: ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ-2018ರ ಸಾಂವಿಧಾನಿಕ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟ್ ಮಂಗಳವಾರ ಭಿನ್ನಮತದ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, 'ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಸಾಂವಿಧಾನಿಕ. ಅದನ್ನು ತೆಗೆದುಹಾಕಬೇಕಿದೆ' ಎಂದು ಹೇಳಿದರು.
ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರು, 'ಆ ಸೆಕ್ಷನ್ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದು, ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಬೇಕಿದೆ' ಎಂದು ಒತ್ತಿ ಹೇಳಿದರು.
ಸಕ್ಷಮ ಪ್ರಾಧಿಕಾರದ ಅನುಮತಿಯ ಅಗತ್ಯವು ಭ್ರಷ್ಟಾಚಾರ ತಡೆ ಕಾಯ್ದೆಗೆ ವಿರುದ್ಧವಾಗಿದೆ. ಇದು ಭ್ರಷ್ಟರನ್ನು ರಕ್ಷಿಸುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಅಭಿಪ್ರಾಯಪಟ್ಟರು.
ನ್ಯಾಯಮೂರ್ತಿ ವಿಶ್ವನಾಥನ್ ಅವರು, 'ಸೆಕ್ಷನ್ 17ಎ ಕೈಬಿಡುವುದು, ಸ್ನಾನದ ನೀರಿನ ಜೊತೆಗೆ ಮಗುವನ್ನೂ ಎಸೆದಂತೆ. ಚಿಕಿತ್ಸೆಯೇ ಕಾಯಿಲೆಗಿಂತಲೂ ಭಯಾನಕ ಎಂದು ಹೇಳಿದ ಹಾಗಾಗುತ್ತದೆ' ಎಂದರು.
ಪ್ರಕರಣದ ಕುರಿತ ಅಂತಿಮ ನಿರ್ಣಯಕ್ಕಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವಿಸ್ತೃತ ನ್ಯಾಯಪೀಠವನ್ನು ರಚಿಸಲಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ, ಈ ಕಾಯ್ದೆಯಡಿ ಜನಪ್ರತಿನಿಧಿಗಳು ಸಾರ್ವಜನಿಕ ಸೇವೆ/ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮಾಡಿರುವ ಯಾವುದೇ ಶಿಫಾರಸುಗಳು ಮತ್ತು ನಿರ್ಧಾರಗಳ ಕುರಿತ ಆರೋಪಗಳ ಮೇಲೆ ತನಿಖೆ ಅಥವಾ ವಿಚಾರಣೆ ಮಾಡುವ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

