ಭುವನೇಶ್ವರ: ಪ್ರಾಚೀನ ಭಾರತದ ಈಗಿನ ಒಡಿಶಾ ರಾಜ್ಯದ ಭಾಗದಲ್ಲಿ ಬೌದ್ಧ ಪಂಥ ಹುಲುಸಾಗಿ ಬೆಳೆದು ಆ ಪಂಥಕ್ಕೆ ಭದ್ರವಾದ ನೆಲೆ ಒದಗಿಸಿತ್ತು. ಬೌದ್ಧ ಪಂಥದ ಅನೇಕ ಪ್ರಾಚೀನ ಕುರುಹುಗಳು ಒಡಿಶಾದಲ್ಲಿ ಇನ್ನೂ ಸಾಕಷ್ಟು ಸಿಗುತ್ತವೆ.
ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕಳುಹಿಸಿ ಕೊಟ್ಟಿದ್ದ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಒಡಿಶಾದ ಬೌದ್ಧ ನೆಲೆಗಳಾದ ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ಐತಿಹಾಸಿಕ ತಾಣಗಳನ್ನು ಯುನೆಸ್ಕೋ ಸಂಸ್ಥೆ 'ಶಾರ್ಟ್ ಲಿಸ್ಟ್' ಮಾಡಿದೆ.
ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ.
ಒಡಿಶಾದ ಪ್ರವಾಸೋದ್ಯಮ ಸಚಿವ ಪಾರ್ವತಿ ಪರೀದಾ ಅವರು ಈ ವಿಷಯನ್ನು ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದರು.
ಕಳೆದ ಡಿಸೆಂಬರ್ನಲ್ಲಿ ಭಾರತ ಸರ್ಕಾರದ ಪ್ರಾಚ್ಯ ಇಲಾಖೆ ಒಡಿಶಾದ ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ಐತಿಹಾಸಿಕ ತಾಣಗಳನ್ನು ಯುನೆಸ್ಕೊ ತಾಣಗಳನ್ನಾಗಿ ಮಾಡಲು ಪಟ್ಟಿ ಕಳುಹಿಸಿಕೊಟ್ಟಿತ್ತು ಎಂದು ತಿಳಿಸಿದ್ದಾರೆ.
ಈ ಮೂರು ತಾಣಗಳು ಶಾರ್ಟ್ ಲಿಸ್ಟ್ನಲ್ಲಿ ಬಂದಿದ್ದು ತುಂಬಾ ಸಂತೋಷವಾಗಿದೆ. ಇವು ಯುನೆಸ್ಕೊ ಪಾರಂಪರಿಕ ತಾಣಗಳಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.
ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ತಾಣಗಳು ಬೌದ್ಧ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದ್ದು ಭಾರತದ ಪ್ರಮುಖ ಬೌದ್ಧ ನೆಲೆಗಳಾಗಿ (ವಿವಾಹರಗಳಾಗಿ) ಸ್ಥಾನ ಪಡೆದುಕೊಂಡಿವೆ. ಇವುಗಳನ್ನು ಬೌದ್ಧ ಪರಂಪರೆಯ 'ಡೈಮಂಡ್ ಟ್ರಯಾಂಗಲ್' ಎಂದು ಕರೆಯಲಾಗುತ್ತದೆ.
ಕಟಕ್ ಜಿಲ್ಲೆಯಲ್ಲಿರುವ ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ತಾಣಗಳು ಪ್ರಾಚೀನ ಭಾರತದಲ್ಲಿ 'ಹೀನಯಾನ', 'ಮಹಾಯಾನ' ಹಾಗೂ 'ವಜ್ರಯಾನ'ಕ್ಕೆ ನೆಲೆ ಒದಗಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

