ಕಾಸರಗೋಡು:: ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಆಟೋರಿಕ್ಷಾ ಚಾಲಕರಿಂದ ತೀವ್ರ ನಿರ್ಲಕ್ಷ್ಯವನ್ನು ಎದುರಿಸುತ್ತಿದ್ದಾರೆ ಎಂದು ದೂರಲಾಗಿದೆ. ರಾತ್ರಿ ವೇಳೆ ಕುಟುಂಬ ಸಹಿತ ಬರುವ ಮತ್ತು ಅಲ್ಪ ದೂರದ ಪ್ರಯಾಣಿಕರು ಇದರಿಂದ ವಿಶೇಷವಾಗಿ ತೊಂದರೆ ಅನುಭವಿಸುತ್ತಾರೆ. ನಗರ ವ್ಯಾಪ್ತಿಯ ಸ್ಥಳಗಳಿಗೆ ಹೋಗಲು ಕರೆದಾಗ ಬರಲು ಹಿಂಜರಿಯುವ ಚಾಲಕರು ಹೆಚ್ಚಿನ ಹಣ ಗಳಿಸುವ ದೀರ್ಘ ದೂರದ ಸವಾರಿಗಳಿಗಾಗಿ ಕಾಯುತ್ತಾರೆ ಎಂದು ಆರೋಪಿಸಲಾಗಿದೆ.
ಕುಟುಂಬದ ಸಂಕಷ್ಟ:
ಎರಡು ದಿನಗಳ ಹಿಂದೆ ರಾತ್ರಿ 8 ಗಂಟೆಗೆ ತನ್ನ ಕುಟುಂಬದೊಂದಿಗೆ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕ ಮುಹಮ್ಮದ್ ಸಾಜೀದ್ ಅಬ್ಬಾಸ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ಅವರ ಸರಕು-ಸಾಮಗ್ರಿಗಳು, ಪತ್ನಿ ಮತ್ತು ಇಬ್ಬರು ಮಕ್ಕಳು ಅವರೊಂದಿಗೆ ನಿಲ್ದಾಣದಲ್ಲಿಳಿದಿದ್ದರು. ನೆಲ್ಲಿಕುನ್ನುವಿನ ಮನೆಗೆ ಕರೆದೊಯ್ಯಲು ನಿಲ್ದಾಣದಲ್ಲಿ ಆಟೋ ಚಾಲಕರನ್ನು ಸಂಪರ್ಕಿಸಿದರೂ ಅವರು ಕರೆದೊಯ್ಯಲು ಒಪ್ಪಲಿಲ್ಲ ಎಂದು ಅವರು ಅವಲತ್ತುಕೊಂಡಿದ್ದಾರೆ.
"ತಾನು ನಿಲ್ದಾಣದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಚಾಲಕನನ್ನು ಕೇಳಿದಾಗ, ಅವನು ಪೋನ್ನಲ್ಲಿ ಮಾತನಾಡುತ್ತಾ ನನ್ನ ಮಾತು ಕೇಳದವನಂತೆ ನಟಿಸಿದನು. ನಂತರ ನಾನು ಅವನನ್ನು ಕೇಳಿದಾಗ, ಯಾರೋ ಬರುತ್ತಿದ್ದಾರೆ ಎಂದು ಉತ್ತರಿಸಿದನು. ನಂತರ ಬಂದ ಅನೇಕ ಆಟೋರಿಕ್ಷಾ ಚಾಲಕರು ನಾನು ಎಲ್ಲಿಗೆ ತಯೆರಳುವುದೆಂದು ಕೇಳಿ ಬಳಿಕ ನಿರ್ಲಕ್ಷಿಸಿದರು. ಇದೇ ವೇಳೆ, ಅವರು ದೂರದ ಸ್ಥಳಗಳಿಗೆ ತೆರಳುವ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು" ಎಂದು ಸಾಜಿದ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಪ್ರಿಪೇಯ್ಡ್ ಕೌಂಟರ್ ಇಲ್ಲದಿರುವುದರಿಂದ ಹಿನ್ನಡೆ:
ಈ ಹಿಂದೆ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಪೋಲೀಸ್ ನಿಯಂತ್ರಿತ ಪ್ರಿಪೇಯ್ಡ್ ಆಟೋ ಕೌಂಟರ್ ಕಾರ್ಯನಿರ್ವಹಿಸುತ್ತಿತ್ತು. ಆದಾಗ್ಯೂ, ಅಮೃತ ಭಾರತ ಯೋಜನೆಯ ಭಾಗವಾಗಿ ನಿಲ್ದಾಣವನ್ನು ನವೀಕರಿಸಿದಾಗ ಈ ಕೌಂಟರ್ ಅನ್ನು ತೆಗೆದುಹಾಕಲಾಯಿತು. ಇದರೊಂದಿಗೆ, ಪ್ರಯಾಣ ದರ ಮತ್ತು ಆಟೋರಿಕ್ಷಾಗಳ ಸಂಖ್ಯೆಯ ಮೇಲೆ ಯಾವುದೇ ನಿಯಂತ್ರಣವಿಲ್ಲ. ಪ್ರಿಪೇಯ್ಡ್ ವ್ಯವಸ್ಥೆ ಜಾರಿಯಲ್ಲಿದ್ದಾಗ, ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಲು ನಿಗದಿತ ಮೊತ್ತವನ್ನು ಬರೆದ ಸ್ಲಿಪ್ ಅನ್ನು ನೀಡಲಾಗುತ್ತಿತ್ತು.
ಈಗ ನಿಯಮ ಉಲ್ಲಂಘನೆ ಸಾಮಾನ್ಯವಾಗುತ್ತಿದೆ.
ಪ್ರಯಾಣಿಕರು ಕೋರಿದ ಸ್ಥಳಕ್ಕೆ ಹೋಗಲು ನಿರಾಕರಿಸುವುದು ಮೋಟಾರು ವಾಹನ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ಆದಾಗ್ಯೂ, ಕಾಸರಗೋಡು ರೈಲು ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲವು ಚಾಲಕರು ನಿಯಮಿತವಾಗಿ ಇದನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಕಡಿಮೆ ದೂರದ ಪ್ರಯಾಣಿಕರು ಪರಿಪರಿಯಾಗಿ ಗೋಗರೆದರೂ ತಪ್ಪಿಸಲು ಮುಖ್ಯ ಕಾರಣ ದೀರ್ಘ ದೂರದ ಪ್ರಯಾಣ ಲಭಿಸಿದರೆ ಹೆಚ್ಚಿನ ದರವನ್ನು ವಿಧಿಸುತ್ತಿರುವುದಾಗಿ ಆರೋಪವೂ ಇದೆ.
ಅಧಿಕಾರಿಗಳು ಮಧ್ಯಪ್ರವೇಶಿಸಬೇಕು:
ಸಜೀದ್ ತನ್ನ ಸ್ನೇಹಿತ ಸವಾದ್ ಪಡಿಞರ್ ಅವರನ್ನು ಸಂಪರ್ಕಿಸಿ ಅವರ ಕಾರಿನಲ್ಲಿ ಕೊನೆಗೂ ಮನೆ ತಲುಪಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಅವರಂತೆಯೇ ಇತರ ಅನೇಕ ಕುಟುಂಬಗಳಿಗೂ ಇದೇ ಅನುಭವವಾಗಿದೆ ಎಂದು ಅವರು ಪೋಸ್ಟ್ ನಲ್ಲಿ ಗಮನಸೆಳೆದಿದ್ದಾರೆ. ಕಾಸರಗೋಡು ಪೋಲೀಸರು ಮತ್ತು ಮೋಟಾರು ವಾಹನ ಇಲಾಖೆ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಇಂತಹ 'ಅನೀತಿ'ಗಳನ್ನು' ಅಳವಡಿಸಿಕೊಂಡಿರುವ ಅಟೋ ಚಾಲಕರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸುತ್ತಾರೆ.


.webp)
.webp)
