ಕಾಸರಗೋಡು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10 ನೇ ತರಗತಿಯವರೆಗೆ ಮಲಯಾಳ ಭಾಷೆಯನ್ನು ಕಡ್ಡಾಯ ಪ್ರಥಮ ಭಾಷೆಯನ್ನಾಗಿ ಮಾಡುವ ರಾಜ್ಯ ಸರ್ಕಾರದ ಮಲಯಾಳಂ ಭಾಷಾ ಮಸೂದೆಯನ್ನು ಬಿಜೆಪಿ ವಿರೋಧಿಸುವುದಾಗಿ ಪಕ್ಷದ ಕೋಯಿಕ್ಕೋಡ್ ವಲಯ ಅಧ್ಯಕ್ಷ, ವಕೀಲ ಕೆ. ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ, ಈ ಬಗ್ಗೆ ಮತ ಚಲಾಯಿಸದೆ ಅಂಗೀಕರಿಸಲ್ಪಟ್ಟ ಈ ಮಸೂದೆಯ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಲು ಮತ್ತು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿಯಲು ಜಿಲ್ಲೆಯ ಶಾಸಕರು ವಿಫಲರಾಗಿದ್ದಾರೆ. ಕನ್ನಡವು ಜನರ ಮಾತೃಭಾಷೆಯಾಗಿದೆ. ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಮಸೂದೆ ಜಿಲ್ಲೆಯ ಲಕ್ಷಾಂತರ ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಮಲಯಾಳಂ ಭಾಷಾ ಮಸೂದೆಯ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕರು ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಮಿತ್ರ ಪಕ್ಷ ಮುಸ್ಲಿಂ ಲೀಗ್ನ ಶಾಸಕರು ತಮ್ಮ ನಿಲುವು ವ್ಯಕ್ತಪಡಿಸಬೇಕು. ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಿಸಲು ಬಿಜೆಪಿ ಸದಾ ಮುಂಚೂಣಿಯಲ್ಲಿದೆ. ಮಲಯಾಳಂ ಭಾಷೆ ಬೋಧಿಸುವುದಕ್ಕೆ ಬಿಜೆಪಿ ಇದಿರಲ್ಲ, ಆದರೆ ಮಸೂದೆಯ 6ನೇ ಪರಿಚ್ಛೇದ ಕನ್ನಡ ಭಾಷಾ ಕಲಿಕೆಯನ್ನು ಗಂಭೀರ ಬಿಕ್ಕಟ್ಟಿಗೆ ಸಿಲುಕಿಸಲಿರುವುದರಿಂದ ಅಗತ್ಯ ತಿದ್ದುಪಡಿ ಹೊರತಾಗಿ ಮಸೂದೆ ಜಾರಿಗೆ ಅವಕಾಶ ನೀಡಬಾರದು.
ಜಿಲ್ಲೆಯ ನನಾ ಕಡೆ ಕನ್ನಡ ಸ್ಥಳನಾಮಗಳನ್ನೂ ಅಪಭ್ರಂಶಗೊಳಿಸಲಾಗಿದೆ.
ಚುನಾವಣೆಗಳಿಗೆ ಸಂಬಂಧಿಸಿದಂತೆ ಪ್ರಕಟಿಸಲಾದ ಎಎಸ್ಡಿ ಪಟ್ಟಿಯನ್ನು ಮಲಯಾಳದಲ್ಲಿ ಪ್ರಕಟಿಸಲಾಗಿದೆ. ಕನ್ನಡದ ಫಾರ್ಮ್ ಮಾತ್ರ ಕೈವಶವಿರುವ ಸಾವಿರಾರು ಮತದಾರರಿಗೆ ಸಕಾಲಕ್ಕೆ ಎನ್ಯುಮರೇಶನ್ ಫಾರ್ಮ್ ಸಲ್ಲಿಸಲು ಸಾಧ್ಯವಾಗದೆ ಎಎಸ್ಡಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅನೇಕ ಬಿಎಲ್ಒಗಳು ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಮತದಾರರನ್ನು ಹೊರಗಿಟ್ಟಿರುವುದು ಕನ್ನಡಿಗರಿಗೆ ಎಸಗುವ ವಂಚನೆಯಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.


