ಕೊಚ್ಚಿ: 'ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್' ಸಿನಿಮಾ ಬಿಡುಗಡೆಗೆ 15 ದಿನಗಳ ಕಾಲ ತಡೆ ನೀಡಿದ್ದ ಕೇರಳ ಹೈಕೋರ್ಟ್ನ ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠವು ತಡೆ ನೀಡುವ ಮೂಲಕ ಚಿತ್ರದ ಬಿಡುಗಡೆಯ ದಾರಿ ಸುಗಮಗೊಂಡಿದೆ.
ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಿನಿಮಾ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ, ಪಿ.ವಿ. ಬಾಲಕೃಷ್ಣನ್ ಅವರಿದ್ಧ ನ್ಯಾಯಪೀಠವು ಮಧ್ಯಂತರ ಆದೇಶ ಪ್ರಕಟಿಸಿದೆ.
ಸಿನಿಮಾದ ಟೀಸರ್ ಜನರ ಭಾವನೆಯನ್ನು ವಿರೂಪಗೊಳಿಸಿ, ಕೋಮು ಸಾಮರಸ್ಯ ಕದಡಲಿದೆ. ಸಿನಿಮಾ ಬಿಡುಗಡೆಗೆ ಪ್ರಮಾಣಪತ್ರ ನೀಡುವ ವೇಳೆ ಸೆನ್ಸಾರ್ ಬೋರ್ಡ್ ತನ್ನ ವಿವೇಚನೆಯನ್ನು ಬಳಸಿಲ್ಲ ಏಕಸದಸ್ಯ ಪೀಠದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಪೂರ್ತಿಯಾಗಿ ಸಿನಿಮಾ ವೀಕ್ಷಿಸದೇ, ಕೆಲವೇ ತುಣುಕುಗಳನ್ನು ನೋಡಿ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ, ಇದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
'ಇದಲ್ಲದೇ, ಮೇಲ್ಮನವಿದಾರರು (ವಿಪುಲ್) ಸಿಬಿಎಫ್ಸಿ ಸೂಚನೆಯಂತೆ ಸಿನಿಮಾಕ್ಕೆ ಕೆಲವಡೆ ಸೇರ್ಪಡೆ, ಕತ್ತರಿ ಹಾಗೂ ಮಾರ್ಪಾಡುಗಳನ್ನು ಮಾಡಿದ್ದಾರೆ. ಮಂಡಳಿಯು ಇದನ್ನು ಗಮನಿಸಿಯೇ ಪ್ರಮಾಣಪತ್ರ ನೀಡಿದೆ. ಒಮ್ಮೆ ಪ್ರಮಾಣಪತ್ರ ನೀಡಿದ ನಂತರ, ಸಂಬಂಧಪಟ್ಟ ಪ್ರಾಧಿಕಾರವು ಸಾರ್ವಜನಿಕ ಸುವ್ಯವಸ್ಥೆ ಹಾಗೂ ನಿಯಮಾವಳಿಗಳನ್ನು ಗಮನದಲ್ಲಿರಿಸಿಕೊಂಡಿದೆ' ಎಂದು ಪೀಠವು ತಿಳಿಸಿದೆ.
'ಸಿನಿಮಾ ಬಿಡುಗಡೆಯಿಂದಾಗಿ ಸಾರ್ವಜನಿಕ ಕಾನೂನು ಸುವ್ಯವಸ್ಥೆ ಎದುರಾದರೆ, ಅದನ್ನು ನಿಭಾಯಿಸುವುದು ರಾಜ್ಯಗಳ ಕರ್ತವ್ಯವಾಗಿದೆ' ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಶುಕ್ರವಾರದ ಬುಕ್ಕಿಂಗ್ ಹಣ ಮರುಪಾವತಿ: 'ಈ ಹಿಂದೆ ನಿಗದಿಪಡಿಸಿದಂತೆ ಶುಕ್ರವಾರ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ಹಣ ಮರುಪಾವತಿ ಮಾಡಲು ಒಪ್ಪಿರುವ ಕಾರಣ, ಸಿನಿಮಾ ನಿರ್ಮಾಪಕರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಿಲ್ಲ' ಅರ್ಜಿದಾರ ಶ್ರೀದೇವ್ ನಂಬೂದಿರಿ ಪರ ಹಾಜರಾದ ವಕೀಲೆ ಮೈತ್ರೇಯಿ ಸಚ್ಚಿದಾನಂದ ಹೆಗಡೆ ಅವರು ತೀರ್ಪಿಗೂ ಮುನ್ನ ತಿಳಿಸಿದ್ದರು.
ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ, ಶನಿವಾರದಿಂದ ಸಿನಿಮಾ ಬುಕ್ಕಿಂಗ್ಗೆ ಆನ್ಲೈನ್ನಲ್ಲಿ ಅವಕಾಶ ನೀಡಲಾಗಿದೆ.

