ತಿರುವನಂತಪುರಂ: ಶಬರಿಮಲೆ ಚಿನ್ನದ ದರೋಡೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಇಂದು ನಿರ್ಣಾಯಕ ನಡೆಯ ಮೂಲಕ ಕುತೂಹಲ ಮೂಡಿಸಿದೆ. ಪತ್ತನಂತಿಟ್ಟ ಸಂಸದ ಮತ್ತು ಯುಡಿಎಫ್ ಸಂಚಾಲಕ ಅಡೂರ್ ಪ್ರಕಾಶ್ ಅವರನ್ನು ಎಸ್ಐಟಿ ಕಚೇರಿಗೆ ಕರೆಸಿ ಎರತಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಿ ಕಳಿಸಿದೆ. ಹೇಳಿಕೆಯನ್ನು ತಿರುವನಂತಪುರಂನಲ್ಲಿ ದಾಖಲಿಸಲಾಗಿದೆ. ಅಡೂರ್ ಪ್ರಕಾಶ್ ಅವರನ್ನು ಎಸ್ಐಟಿ ಸಮನ್ಸ್ ಜಾರಿ ಮಾಡಿತ್ತು. ಈ ಹಿಂದೆ, ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಜೊತೆ ಅಡೂರ್ ಪ್ರಕಾಶ್ ಸಂಪರ್ಕ ಹೊಂದಿದ್ದರು ಎಂಬ ಆರೋಪಗಳಿದ್ದವು. ಇಬ್ಬರೂ ಒಟ್ಟಿಗೆ ಇರುವ ಚಿತ್ರಗಳು ಸಹ ಹೊರಬಂದಿದ್ದವು. ಶಬರಿಮಲೆ ಚಿನ್ನದ ದರೋಡೆ ಪ್ರಕರಣದಲ್ಲಿ ಯುಡಿಎಫ್ ಸಿಪಿಎಂ ಮತ್ತು ಸರ್ಕಾರದ ವಿರುದ್ಧ ಪ್ರಚಾರ ಮಾಡುತ್ತಿರುವ ಸಮಯದಲ್ಲಿ ಎಸ್ಐಟಿಯ ಈ ನಿರ್ಣಾಯಕ ನಡೆ ಗಮನಾರ್ಹವಾಗಿದೆ.
ಎಸ್ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾಗಿ ಉತ್ತರಿಸಿರುವುದಾಗಿ ಅಡೂರ್ ಪ್ರಕಾಶ್ ಬಳಿಕ ಮಾಧ್ಯಮಗಳಿಗೆ ತಿಳಿಸಿದರು. ಏತನ್ಮಧ್ಯೆ, ಉಣ್ಣಿಕೃಷ್ಣನ್ ಪೋತ್ತಿಯನ್ನು ಹಲವಾರು ಬಾರಿ ಭೇಟಿಯಾಗಿದ್ದಾಗಿ ಈ ಹಿಂದೆ ಒಪ್ಪಿಕೊಂಡ ಅಡೂರ್ ಪ್ರಕಾಶ್, ಶಬರಿಮಲೆ ಪ್ರಕರಣಕ್ಕೂ ತನಗೆ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದ್ದಾರೆ.
ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೋದಾಗ ಅಡೂರ್ ಪ್ರಕಾಶ್ ಪೋತ್ತಿಯೊಂದಿಗೆ ಇದ್ದರು. ಆದಾಗ್ಯೂ, ಸೋನಿಯಾ ಗಾಂಧಿ ಭೇಟಿ ಮಾಡುವ ಸಂದರ್ಭ ಅವರ ಕ್ಷೇತ್ರದ ಮತದಾರನಾದ ಪೋತ್ತಿ ತನ್ನನ್ನು ಕರೆದಿದ್ದರಷ್ಟೆ ಎಂದು ಅಡೂರ್ ಪ್ರಕಾಶ್ ಈ ಹಿಂದೆ ವಿವರಣೆ ನೀಡಿದ್ದರು.
ಇತ್ತೀಚಿನ ದಿನಗಳಲ್ಲಿ, ಎಸ್ಐಟಿ ಮಾಜಿ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಮತ್ತು ಮಾಜಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರ ಹೇಳಿಕೆಗಳನ್ನು ದಾಖಲಿಸಿತ್ತು. ಇದರ ನಂತರ, ಅಡೂರ್ ಪ್ರಕಾಶ್ ವಿರುದ್ಧದ ತನಿಖೆಯೂ ಮುಂದುವರೆದಿದೆ. ರಾಜಕೀಯ ಅಸ್ತ್ರವಾಗಿ ಅಡೂರ್ ಪ್ರಕಾಶ್ ಉಣ್ಣಿಕೃಷ್ಣನ್ ಪಾಟಿ ಅವರೊಂದಿಗೆ ಇರುವ ಚಿತ್ರಗಳನ್ನು ಸಿಪಿಎಂ ಈಗಾಗಲೇ ಬಿಡುಗಡೆ ಮಾಡಿತ್ತು.
ಏತನ್ಮಧ್ಯೆ, ವಿರೋಧ ಪಕ್ಷದ ನಾಯಕರು ಅಡೂರ್ ಪ್ರಕಾಶ್ ಅವರನ್ನು ಪ್ರಶ್ನಿಸಿದರೆ, ಮುಖ್ಯಮಂತ್ರಿಯನ್ನೂ ಪ್ರಶ್ನಿಸಬೇಕು ಎಂದು ಈ ಹಿಂದೆ ಪ್ರತಿಕ್ರಿಯಿಸಿದ್ದರು. ಪೋತ್ತಿ ಮುಖ್ಯಮಂತ್ರಿಯೊಂದಿಗೆ ಇರುವ ಚಿತ್ರಗಳು ಸಹ ಹೊರಬಂದಿದ್ದವು.
ನಿನ್ನೆ ಕುಂಬಳೆಯಿಂದ ಆರಂಭಗೊಮಡ ಯುಡಿಎಫ್ ನ ನವಯುಗ ಯಾತ್ರೆಯಲ್ಲಿ ಭಾಗವಹಿಸಿದ್ದ ಅಡೂರ್ ರಾತ್ರಿ ತಿರುವನಂತಪುರಕ್ಕೆ ತೆರಳಿದ್ದು, ಇಂದು ಬೆಳಿಗ್ಗೆಯೂ ಅವರನ್ನು ಎಸ್ಐಟಿ ಕರೆಸಿಕೊಂಡಿರುವುದು ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

