ಕೋಲ್ಕತಾ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿ ಹಾಗೂ ಮಗುವಿನ ಮೃತದೇಹವನ್ನು ಶವಾಗಾರದಲ್ಲಿರಿಸಿ ಪತಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವಿಚಾರಣೆಗೆ ಹಾಜರಾದ ಘಟನೆ ಮಾಲ್ಡಾದಲ್ಲಿ ಶುಕ್ರವಾರ ನಡೆದಿದೆ.
ಈ ಘಟನೆ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಮತ್ತೊಮ್ಮೆ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯ ವಿಚಾರಣೆಯ ಹಂತದ ನಿಗದಿತ ಮುಕ್ತಾಯಕ್ಕೆ ಒಂದು ದಿನಕ್ಕಿಂತ ಮುನ್ನ ಈ ಘಟನೆ ಸಂಭವಿಸಿದೆ.
ಶಿಕ್ಷಕ ಮುಹಮ್ಮದ್ ಯಾಸಿನ್ ಅನ್ಸಾರಿ ತನ್ನ ಪತ್ನಿ ಹಲೀಮಾ ಖಾತುನ್ ಹಾಗೂ ಅವರ 9 ತಿಂಗಳ ಮಗುವಿನೊಂದಿಗೆ ಎಸ್ಐಆರ್ ವಿಚಾರಣಾ ಕೇಂದ್ರಕ್ಕೆ ತಲುಪಲು ರಿಕ್ಷಾದಲ್ಲಿ ಬಸ್ ಸ್ಟ್ಯಾಂಡ್ ಗೆ ತೆರಳುತ್ತಿದ್ದರು. ಈ ಸಂದರ್ಭ ಅವರು ಪ್ರಯಾಣಿಸುತ್ತಿದ್ದ ರಿಕ್ಷಾ ಮಗುಚಿ ಅಪಘಾತ ಸಂಭವಿಸಿದೆ. ಹಲೀಮಾ ಖಾತುನ್ ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿತು ಎಂದು ಅವರ ಭಾವ ಅಬ್ದುರ್ ರೆಹ್ಮಾನ್ ಅನ್ಸಾರಿ ತಿಳಿಸಿದ್ದಾರೆ.
ಅರ್ಜಿಗಳಲ್ಲಿ ವ್ಯತ್ಯಾಸ ಇದ್ದುದರಿಂದ ಮುಹಮ್ಮದ್ ಯಾಸಿನ್ ಅನ್ಸಾರಿ ಹಾಗೂ ಹಲೀಮಾ ಖಾತುನ್ ಗೆ ಸಮನ್ಸ್ ನೀಡಲಾಗಿತ್ತು. ''ನಾವು ಎಸ್ಐಆರ್ ವಿಚಾರಣೆಗಾಗಿ ಹೋಗಿದ್ದೆವು. ಇಲ್ಲದೆ ಇದ್ದರೆ ಹೋಗುತ್ತಿರಲಿಲ್ಲ'' ಎಂದು ಮುಹಮ್ಮದ್ ಯಾಸಿನ್ ಅನ್ಸಾರಿ ತಿಳಿಸಿದ್ದಾರೆ.
ಘಟನೆ ಕುರಿತಂತೆ ರಾಜ್ಯದ ಆಡಳಿತಾರೂಢ ಟಿಎಂಸಿ ಚುನಾವಣಾ ಆಯೋಗ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮಾಲ್ಡಾ ಜಿಲ್ಲೆಯ ಯುವ ತೃಣಮೂಲ ಕಾಂಗ್ರೆಸ್ ನ ಅಧ್ಯಕ್ಷ ಪ್ರಸನ್ಜಿತ್ ದಾಸ್, ಬಿಜೆಪಿಗಾಗಿ ಚುನಾವಣಾ ಆಯೋಗ ಜನರಿಗೆ ತೊಂದರೆ ನೀಡುತ್ತಿರುವುದನ್ನು ಹಾಗೂ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಈ ನಡುವೆ ಬಿಜೆಪಿಯ ಸ್ಥಳೀಯ ವಕ್ತಾರ ಅಮ್ಲಾನ್ ಭಾದುರಿ, ಪಶ್ಚಿಮ ಬಂಗಾಳದಲ್ಲಿ ಸಂಭವಿಸುವ ಸಾವುಗಳನ್ನು ಟಿಎಂಸಿ ರಾಜಕೀಯಗೊಳಿಸುತ್ತಿದೆ ಎಂದು ಹೇಳಿದ್ದಾರೆ.

