ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ನೀಡಿದ ಹೇಳಿಕೆಗಾಗಿ ವಿಜಯ್ ಶಾ ವಿರುದ್ಧ ಕಾನೂನುಕ್ರಮ ಕೈಗೊಳ್ಳುವ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದ ಎರಡು ದಿನಗಳ ಬಳಿಕ ಅವರು ಕ್ಷಮೆಯಾಚಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶಾ ಅವರು, ಭಾರತೀಯ ಸೇನೆಯ ಮಹಿಳಾ ಅಧಿಕಾರಿಯನ್ನು ಅಪಮಾನಿಸುವ ಯಾವುದೇ ಉದ್ದೇಶ ತನಗಿರಲಿಲ್ಲ ಎಂದರು. ತಾನಾಡಿದ ವಿವಾದಿತ ಮಾತುಗಳು, ತನ್ನ ಭಾವನೆಗಳನ್ನು ಪ್ರತಿಬಿಂಬಿಸುವುದಿಲ್ಲವೆಂದವರು ಸ್ಪಷ್ಟಪಡಿಸಿದರು.
''ಆ ಪದಗಳನ್ನು ದೇಶಭಕ್ತಿಯ ಹುಮ್ಮಸ್ಸು, ಭಾವಾತಿರೇಕ ಹಾಗೂ ಆತುರತೆಯೊಂದಿಗೆ ಹೇಳಿದ್ದೆ. ನಾನಾಡಿದ ಪ್ರಮಾದಕಾರಿ ಮಾತಿನ ಹಿಂದಿರುವ ಭಾವನೆಯನ್ನು ಪರಿಗಣಿಸಬೇಕಾಗಿದೆ. ಈ ಹೇಳಿಕೆ ನೀಡುವುದ ಹಿಂದೆ ನನಗೆ ಯಾವುದೇ ದುರುದ್ದೇಶವಿರಲಿಲ್ಲವೆಂದು ನಿಮಗೆಲ್ಲರಿಗೂ ತಿಳಿದಿದೆ'' ಎಂದು ವಿಜಯ್ ಶಾ ವೀಡಿಯೊದಲ್ಲಿ ತಿಳಿಸಿದ್ದಾರೆ.
ಈ ವಿವಾದದ ಕುರಿತಾಗಿ ತಾನು ಹಿಂದೆಯೂ ಕ್ಷಮೆಯಾಚಿಸಿದ್ದೆ. ಈಗ ಮತ್ತೊಮ್ಮೆ ಕ್ಷಮೆಯಾಚಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ.
''ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ತಾನು ನೀಡಿದ್ದ ಹೇಳಿಕೆಯು ಸಣ್ಣ ತಪ್ಪೆಂದು ಬಣ್ಣಿಸಿದ ವಿಜಯ್ ಶಾ, ಇದರಿಂದ ಉಂಟಾದ ವಿವಾದವು ತನ್ನ ಪಾಲಿಗೆ ಅತ್ಯಂತ ಯಾತನಾಮಯವಾಗಿತ್ತು'' ಎಂದರು.
"ಪೆಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಸೇನೆ ನಡೆಸಿದ ಆಪರೇಶನ್ ಸಿಂಧೂರ್ ಮೂಲಕ, ಭಾರತದ ಪುತ್ರಿಯರನ್ನು ವಿಧವೆಯರನ್ನಾಗಿಸಿದವರಿಗೆ ಪಾಠಕಲಿಸಲು ಅವರದ್ದೇ ಸಮುದಾಯದ ಸಹೋದರಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕಳುಹಿಸಿದ್ದಾರೆ'' ಎಂದು ಹೇಳಿದ್ದುದು ಭಾರೀ ವಿವಾದವನ್ನು ಸೃಷ್ಟಿಸಿತು.
ಸೋಫಿಯಾ ಖುರೇಷಿ ಅವರು ಆಪರೇಶನ್ ಸಿಂಧೂರ್ ಗೆ ಸಂಬಂಧಿಸಿದ ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳು ನಡೆಸಿದ ಪತ್ರಿಕಾಗೋಷ್ಠಿಗಳಲ್ಲಿ, ಕಾರ್ಯಾಚರಣೆಯ ವಿವರಗಳನ್ನು ನೀಡುತ್ತಿದ್ದ ವಕ್ತಾರರಲ್ಲೊಬ್ಬರಾಗಿದ್ದರು.

