HEALTH TIPS

ಅಂಗವೈಕಲ್ಯ ಪಿಂಚಣಿ ಪಡೆಯುವ ನಿವೃತ್ತ ಸೈನಿಕರಿಗೆ ತೆರಿಗೆ ವಿನಾಯಿತಿ ರದ್ದು: ಸರ್ಕಾರದ ನಿರ್ಧಾರಕ್ಕೆ ಮಾಜಿ ಸೈನಿಕರ ತೀವ್ರ ಆಕ್ರೋಶ

ನವದೆಹಲಿ: ಇತ್ತೀಚೆಗೆ ಪ್ರಕಟವಾದ ಕೇಂದ್ರ ಬಜೆಟ್‌ನಲ್ಲಿ ಅಂಗವೈಕಲ್ಯ ಪಿಂಚಣಿ ಪಡೆಯುವ ರಕ್ಷಣಾ ಸಿಬ್ಬಂದಿಗೆ ಲಭ್ಯವಿದ್ದ ಆದಾಯ ತೆರಿಗೆ ವಿನಾಯಿತಿಯನ್ನು ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರಕ್ಕೆ ದೇಶದಾದ್ಯಂತ ಮಾಜಿ ಸೈನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕ್ರಮವು ಅಂಗವಿಕಲ ಯೋಧರ ಹಕ್ಕುಗಳನ್ನು ಘಾಸಿಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು thewire.in ವರದಿ ಮಾಡಿದೆ.

ಬಜೆಟ್‌ನ ಪ್ರಕಾರ, ಇನ್ನು ಮುಂದೆ ದೈಹಿಕ ಅಂಗವೈಕಲ್ಯದಿಂದಾಗಿ ಸೇವೆಯಿಂದ "ಅಮಾನ್ಯಗೊಳಿಸಲ್ಪಟ್ಟ" ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಆದರೆ ಅಂಗವೈಕಲ್ಯ ಹೊಂದಿದ್ದರೂ ತಮ್ಮ ಪೂರ್ಣ ಸೇವಾ ಅವಧಿ (ಸೂಪರ್‌ಅನ್ಯುಯೇಷನ್) ಪೂರ್ಣಗೊಳಿಸಿ ನಿವೃತ್ತರಾದ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ.

ಈ ನಿರ್ಧಾರವು ಅಂಗವಿಕಲ ಪಿಂಚಣಿದಾರರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸೇನೆಯಿಂದ ನಿವೃತ್ತರಾದವರು ಕಳವಳ ವ್ಯಕ್ತಪಡಿಸಿದ್ದಾರೆ. ಸೇವೆಯಿಂದ ಅಮಾನ್ಯಗೊಂಡವರಿಗಿಂತ ಸೇವಾವಧಿ ಪೂರ್ಣಗೊಳಿಸಿ ನಿವೃತ್ತರಾದ ಅಂಗವಿಕಲ ಸೈನಿಕರ ಸಂಖ್ಯೆ ಹೆಚ್ಚಿನದಿರುವುದರಿಂದ ದೊಡ್ಡ ವರ್ಗದ ಯೋಧರು ನೇರವಾಗಿ ನಷ್ಟ ಅನುಭವಿಸಲಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮೇಜರ್ ಜನರಲ್ ಶೈಲ್ ಝಾ ಅವರು, "ಅಗ್ನಿವೀರ್ ಯೋಜನೆಯಿಂದ ದೇಶದ ಭದ್ರತೆ ಮೊದಲು ಹದಗೆಟ್ಟಿತು. ಈಗ ಅಂಗವೈಕಲ್ಯ ಪಿಂಚಣಿಯ ಮೇಲಿನ ದಾಳಿಯಿಂದ ವೃತ್ತಿಪರ ಸೈನಿಕರ ಬದ್ಧತೆಯ ನೀತಿಯನ್ನೇ ಕುಗ್ಗಿಸಲಾಗುತ್ತಿದೆ. ರಾಷ್ಟ್ರದ ರಕ್ಷಣೆಯ ಶವಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ ಹೊಡೆಯಲಾಗುತ್ತಿದೆ," ಎಂದು ಕಿಡಿಕಾರಿದ್ದಾರೆ.

ಇಲ್ಲಿಯವರೆಗೆ ಸೇವೆಯ ವೇಳೆ ಅಂಗವಿಕಲರಾದ ಸೈನಿಕರನ್ನು ಆಡಳಿತಾತ್ಮಕ ಹುದ್ದೆಗಳ ಮೂಲಕ ಸೇವೆಯಲ್ಲಿ ಮುಂದುವರಿಸಲಾಗುತ್ತಿತ್ತು. ಕರ್ತವ್ಯದ ಸಮಯದಲ್ಲಿ ಗಾಯಗೊಂಡು ಅಂಗವೈಕಲ್ಯಕ್ಕೊಳಗಾದ ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ, ಜೀವಾವಧಿ ವೈದ್ಯಕೀಯ ಚಿಕಿತ್ಸೆ ಹಾಗೂ ಹೆಚ್ಚುವರಿ ತೆರಿಗೆಮುಕ್ತ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗುತ್ತಿವೆ.

"ಹಣಕಾಸು ಮಸೂದೆ 2026ರಲ್ಲಿ ಸರ್ಕಾರವು ಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದ ಮಾಜಿ ಸೈನಿಕರು ಮತ್ತು ಸೇವಾ ಸಿಬ್ಬಂದಿಗೆ ನೀಡಲಾಗುತ್ತಿದ್ದ ಆದಾಯ ತೆರಿಗೆ ವಿನಾಯಿತಿಯ ಎಲ್ಲಾ ಪ್ರಯೋಜನಗಳನ್ನು ತೆಗೆದುಹಾಕಿದೆ. ನಿವೃತ್ತಿಯವರೆಗೂ ಸೇವೆ ಸಲ್ಲಿಸಿದ ಧೈರ್ಯಶಾಲಿಗಳ ವಿರುದ್ಧ ಇದು ನಿರ್ದಯಿ ಕ್ರಮ- ವಾಹ್!" ಎಂದು ನಿವೃತ್ತ ಮೇಜರ್ ಜನರಲ್ ಬೀರೇಂದರ್ ಧನೋವಾ ಅವರು ಸಹ X ನಲ್ಲಿ ಪೋಸ್ಟ್ ಮಾಡಿದ್ದಾರೆ.

"ನೀವು ಕರ್ತವ್ಯದ ವೇಳೆ ಗಾಯಗೊಂಡು ಅಮಾನ್ಯರಾದರೆ ಪಿಂಚಣಿ ಸೂಚ್ಯಂಕ ಸಿಗುವುದಿಲ್ಲ ಆದರೆ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ನಿವೃತ್ತಿಯವರೆಗೂ ಸೇವೆ ಮುಂದುವರಿಸಿದರೆ ಪಿಂಚಣಿ ಸೂಚ್ಯಂಕ ಸಿಗುತ್ತದೆ ಆದರೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಯಾವ ದಾರಿ ನೋಡಿದರೂ ಕೊನೆಗೆ ಸರ್ಕಾರವೇ ಗೆಲ್ಲುತ್ತದೆ," ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಈಗ ರದ್ದುಗೊಂಡಿರುವ ತೆರಿಗೆ ವಿನಾಯಿತಿ 1922ರಿಂದ ಜಾರಿಯಲ್ಲಿತ್ತು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಇನ್ನೊಂದೆಡೆ, ಅಂಗವಿಕಲ ಪಿಂಚಣಿದಾರ ಸೈನಿಕರಲ್ಲಿ ಎರಡು ಪ್ರತ್ಯೇಕ ವರ್ಗಗಳನ್ನು ಸೃಷ್ಟಿಸಿ ತೆರಿಗೆ ವಿನಾಯಿತಿಯನ್ನು ವಿಭಿನ್ನವಾಗಿ ಅನ್ವಯಿಸುವುದು ಹೇಗೆ ನ್ಯಾಯಸಮ್ಮತ ಎಂಬ ಪ್ರಶ್ನೆಯನ್ನು ಮಾಜಿ ಕರ್ನಲ್ ಒಬ್ಬರು ಎತ್ತಿದ್ದಾರೆ.

"ದೇಶ ಸೇವೆ ಮಾಡುವಾಗ ಅಂಗವೈಕಲ್ಯಕ್ಕೊಳಗಾದ ಸೈನಿಕರ ವಿರುದ್ಧ ಸರ್ಕಾರ ಮತ್ತೆ ತಾರತಮ್ಯ ಮಾಡುತ್ತಿರುವುದು ಆಘಾತಕಾರಿ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries