ಕಾಸರಗೋಡು: ಸಣ್ಣ ಮತ್ತು ಮಧ್ಯಮ ವರ್ಗದ ಆಸ್ಪತ್ರೆಗಳನ್ನು ಸಂರಕ್ಷಿಸುವುದುಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಕಾಞಂಗಾಡು ಡಿಎಂಒ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು. ಕಾಸರಗೋಡು ಜಿಲ್ಲಾ ಐಎಂಎ ವತಿಯಿಂದ ಸಾರ್ವಜನಿಕ ಆರೋಗ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜನಸಾಮಾನ್ಯರಿಗೆ ಕನಿಷ್ಟ ವೆಚ್ಚದಲ್ಲಿ ಚಿಕಿತ್ಸೆ ಖಚಿತಪಡಿಸಬೇಕು, 15ಕ್ಕಿಂತಲೂ ಕಡಿಮೆ ಹಾಸಿಗೆಯುಳ್ಳ ಆಸ್ಪತ್ರೆಗಳನ್ನು ಕ್ಲಿನಿಕಲ್ ಎಷ್ಟಾಬ್ಲಿಷ್ಮೆಂಟ್ ವ್ಯಾಪ್ತಿಯಿಂದ ಹೊರತು ಪಡಿಸಬೇಕು ಮೊದಲಾದ ಬೇಡಿಕೆಗಳೊಂದಿಗೆ ಧರಣಿ ಸತ್ಯಾಗ್ರಹ ನಡೆಯಿತು. ಐಎಂಎ ಸೆಂಟ್ರಲ್ ವಕಿರ್ಂಗ್ ಕಮಿಟಿ ಸದಸ್ಯ ಡಾ. ಬಿ. ನಾರಾಯಣನಾಯ್ಕ್ ಧರಣಿ ಉದ್ಘಾಟಿಸಿದರು.
ಕ್ಲಿನಿಕಲ್ ಸಂಸ್ಥೆಗಳ ಅಸ್ತಿತ್ವವನ್ನೇ ಸಂಧಿಗ್ಧತೆಗೆ ಸಿಲುಕಿಸಿರುವ ಕಾಯ್ದೆಯನ್ನು ಪರಿಷ್ಕರಿಸದೇ ಹೋದರೆ ಸಣ್ಣಪುಟ್ಟ ಆಸ್ಪತ್ರೆಗಳಿಗೆ ಭವಿಷ್ಯವೇ ಇಲ್ಲದಾಗುವ ಆತಂಕವಿದೆ. ಕಡಿಮೆ ವೆಚ್ಚದಲ್ಲಿ ನಾಗರಿಕರಿಗೆ ಪ್ರಾಥಮಿಕ ಮಟ್ಟದ ಉತ್ಕøಷ್ಟ ಚಿಕಿತ್ಸಾ ಸೌಲಭ್ಯ ಒದಗಿಸುವ ಸಣ್ಣ ಆಸ್ಪತ್ರೆಗಳನ್ನು ಉಳಿಸುವಂತೆ ಪೂರಕ ಸೌಲಭ್ಯ ಒದಗಿಸಿ ಕಾಯ್ದೆ ಪರಿಷ್ಕರಿಸಬೇಕಾದ ಅಗತ್ಯವಿದೆ. ಕಳೆದ 10 ವರ್ಷದಲ್ಲಿ ಕೇರಳದಲ್ಲಿ 800ರಷ್ಟು ಸಣ್ಣ ಆರೋಗ್ಯ ಚಿಕಿತ್ಸಾ ಸಂಸ್ಥೆಗಳು ಮುಚ್ಚಲ್ಪಟ್ಟಿದೆ ಎಂದು ತಿಳಿಸಿದರು.
ಐಎಂಎ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಡಾ. ಜನಾರ್ಧನ ನಾಯ್ಕ್ ಸಿ. ಎಚ್. ಅಧ್ಯಕ್ಷತೆ ವಹಿಸಿದ್ದರು. ಐಎಂಎ ಕಾಂಞಂಗಾಡು ಬ್ರಾಂಚ್ ಮಾಜಿ ಅಧ್ಯಕ್ಷ ಡಾ. ಸುರೇಶ್ ವಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಶಶಿರೇಖಾ, ಐಎಂಎ ಕಾಸರಗೋಡು ಬ್ರಾಂಚ್ ಸೆಕ್ರೆಟರಿ ಡಾ. ಅಣ್ಣಪ್ಪ ಕಾಮತ್, ಕೇರಳ ಸರ್ಕಾರಿ ಮೆಡಿಕಲ್ ಆಫೀಸರ್ಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಡಾ. ಶ್ರುತಿ ಉಪಸ್ಥಿತರಿದ್ದರು. ಐಎಂಎ ಕಾಞಂಗಾಡು ಘಟಕ ಅಧ್ಯಕ್ಷ ಡಾ. ರಮೇಶ್ ಡಿ. ಜಿ. ಸ್ವಾಗತಿಸಿದರು. ಜಿಲ್ಲಾ ಘಟಕ ಸಂಚಾಲಕ ಡಾ. ಖಾಸಿಂ ವಂದಿಸಿದರು.


