ಬದಿಯಡ್ಕ: ಕೊಲ್ಲಂಗಾನವೆಂಬ ಕುಗ್ರಾಮವನ್ನು ಕಲಾಗ್ರಾಮವನ್ನಾಗಿಸಿದ ಕೀರ್ತಿ ನವರಂಗ್ ಆಟ್ರ್ಸ್ ಸಂಸ್ಥೆಗೆ ಸಲ್ಲುತ್ತದೆ. 50 ದಶಕಗಳ ಹಿಂದೆ ಸಮಾನ ಚಿಂತಕರ ತಂಡದ ಕಾರ್ಯ ಅನೇಕ ಕಲಾವಿದರನ್ನು ಹುಟ್ಟುಹಾಕುವಲ್ಲಿ ಕಾರಣವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಡಾ. ಸುಬ್ಬಣ್ಣ ರೈ ಹೇಳಿದರು.
ಕೊಲ್ಲಂಗಾನ ಗಾಂಧಿನಗರ ನವರಂಗ್ ಆಟ್ರ್ಸ್ ಕಲಾಸಂಸ್ಥೆಯ ಸುವರ್ಣ ವರ್ಷಾಚರಣೆಯ ಸಂದರ್ಭದಲ್ಲಿ ಶಿಥಿಲಾವಸ್ಥೆಯಲ್ಲಿರುವ ರಂಗಮಂದಿರ-ಬಣ್ಣದ ಮನೆಯ ಪುನರ್ ನಿರ್ಮಾಣ ಕಾರ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವಮಾಧ್ಯಮಗಳಿಂದಾಗಿ ರಂಗಚಟುವಟಿಕೆಗೆ ಸ್ವಲ್ಪಮಟ್ಟದ ಹಿನ್ನಡೆಯುಂಟಾಗಿದೆ. ರಂಗ ಚಟುವಟಿಕೆ ಅಂದರೆ ಕೂಡುಕುಟುಂಬದಂತೆ, ಇದ್ದರೆ ಮಾತ್ರ ಅದು ಮುನ್ನಡೆಯಲು ಸಾಧ್ಯವಿದೆ. ಸುವರ್ಣ ವರ್ಷಾಚರಣೆಯಲ್ಲಿರುವ ಕೊಲ್ಲಂಗಾನದ ರಂಗಮಂದಿರದ ತೇರನ್ನು ಎಳೆಯುವಲ್ಲಿ ನಾವೆಲ್ಲಾ ಕೈಜೋಡಿಸೋಣ ಎಂದರು.
ಕೊಲ್ಲಂಗಾನ ಶ್ರೀಕ್ಷೇತ್ರದ ಶ್ರೀಚಕ್ರ ಆರಾಧಕ ಬ್ರಹ್ಮಶ್ರೀ ತಂತ್ರಿ ಗಣಾರಾಜ ಉಪಾಧ್ಯಾಯರು ಆಶೀರ್ವಚನ ನೀಡಿ ಮಾತನಾಡಿ, ಹಿರಿಯರ ಕಾಲದಿಂದಲೇ ರಂಗಮಂದಿರದಲ್ಲಿ ದುಡಿದ ಅನೇಕ ಮಂದಿ ಇಂದು ನಾಡಿನಾದ್ಯಂತ ಹೆಸರನ್ನು ಗಳಿಸುತ್ತಾ ಮುಂದುವರಿಯುತ್ತಿದ್ದಾರೆ. ಅವರೆಲ್ಲರೂ ಒಂದೇ ಮನಸ್ಸಿನಿಂದ ಕೈಜೋಡಿಸಿದರೆ 50ನೇ ವರ್ಷದ ಸಂಭ್ರಮ ಸುವರ್ಣವಾಗಲಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶ್ಯಾಮ್ಪ್ರಸಾದ್ ಮಾನ್ಯ, ಮಧೂರು ಗ್ರಾಮಪಂಚಾಯಿತಿ ಸದಸ್ಯೆ ಮಂಜು ಕೆ.ವಿಜಯ್, ರಾಜ್ಯ ಲೆಕ್ಕಪರಿಶೋಧಕ ವಿಭಾಗ ಅಧಿಕಾರಿ ಗೋಪಾಲಕೃಷ್ಣ ಪಿ., ನಿವೃತ್ತ ಪ್ರಾಂಶುಪಾಲೆ ಸರಸ್ವತಿ ಸುಬ್ಬಣ್ಣ ರೈ, ಕಲ್ಲಕಟ್ಟ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಪಿ.ವಿ.ಚಿತ್ತಾರಿ, ಬೇಳ ಸಂತ ಬಿಎಎಸ್ಬಿ ಶಾಲೆಯ ಅಧ್ಯಾಪಕ ಸ್ಟೇನಿ ಲೋಬೋ ಕೊಲ್ಲಂಗಾನ ಗೌರವ ಉಪಸ್ಥಿತರಿದ್ದು ಮಾತನಾಡಿದರು. ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ನಾವಡ ಓಣಿಕುಂಡು ಕೊಲ್ಲಂಗಾನ ನಿಧಿ ಸಂಚಯನವನ್ನು ಉದ್ಘಾಟಿಸಿದರು. ಕಾಸರಗೋಡು ಅಗ್ನಿಶಾಮಕ ದಳದ ಅಧಿಕಾರಿ ರಮೇಶ್ ಅರ್ತಲೆ ವಿನಂತಿ ಪತ್ರ ಬಿಡುಗಡೆಗೊಳಿಸಿದರು. ಶಾರದಾ ಭಜನಾ ಮಂದಿರದ ಅಧ್ಯಕ್ಷ ಶ್ರೀಶರಾಜ್ ಶೆಟ್ಟಿ, ನಿವೃತ್ತ ಅರೆಸೇನಾ ಅಧಿಕಾರಿ ನಾರಾಯಣ ನಾಯ್ಕ ಕೊಲ್ಲಂಗಾನ, ಮುಹಿದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿ ಮೊಹಮ್ಮದ್ ಸಾಕ್, ನವರಂಗ್ ಆಟ್ರ್ಸ್ನ ಹಿರಿಯ ಸದಸ್ಯೆ ಭವಾನಿ ನಾರಾಯಣ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನವರಂಗ್ ಆಟ್ರ್ಸ್ನ ಹಿರಿಯ ಸದಸ್ಯ ವೆಂಕಪ್ಪ ನಾಯ್ಕ ಪಿ.ಎಂ. ದೇವರಕೆರೆ ಅವರಿಗೆ ಸುವರ್ಣ ಗೌರವಾಭಿನಂದನೆ ಸಲ್ಲಿಸಲಾಯಿತು. ನವರಂಗ್ ಆಟ್ರ್ಸ್ನ ಅಧ್ಯಕ್ಷ ಉದಯಕುಮಾರ್ ಆಚಾರ್ಯ ಕೊಲ್ಲಂಗಾನ ಸ್ವಾಗತಿಸಿ, ಕಾರ್ಯದರ್ಶಿ ರವಿಶಂಕರ ಶೆಟ್ಟಿ ಕೊಲ್ಲಂಗಾನ ವಂದಿಸಿದರು. ಗೌರವ ಸಲಹೆಗಾರ ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸದಸ್ಯರು `ರಂಗಗಾಯನ'ದ ಪ್ರಾರ್ಥನೆ ಹಾಡಿದರು. ಕಿಶೋರ್ ಚಂದ್ರ ರೈ, ಭವಾನಿ ನಾರಾಯಣ ನಾಯ್ಕ, ಸುಜಾತ ಕಿಶೋರ್ ರೈ, ಊರಿನ ಕಲಾಸಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೊಲ್ಲಂಗಾನ ಶ್ರೀಕ್ಷೇತ್ರದ ಶ್ರೀಚಕ್ರ ಆರಾಧಕ ಬ್ರಹ್ಮಶ್ರೀ ತಂತ್ರಿ ಗಣಾರಾಜ ಉಪಾಧ್ಯಾಯರ ದಿವ್ಯಹಸ್ತದಿಂದ ಶಿಲಾನ್ಯಾಸ ಕಾರ್ಯಕ್ರಮ ಜರಗಿತು.

.jpg)
.jpg)
