HEALTH TIPS

ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣ ವಿಳಂಬ; ಆರೋಗ್ಯ ಸಚಿವರು ಮತ್ತು ಸರ್ಕಾರದ ವಿರುದ್ಧ ಶಾಸಕ ಎನ್.ಎ. ನೆಲ್ಲಿಕ್ಕುನ್ನು ಹೈಕೋರ್ಟ್ ಮೊರೆ

ಕಾಸರಗೋಡು: ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಬ್ಲಾಕ್ ಅನ್ನು ಪೂರ್ಣಗೊಳಿಸುವಲ್ಲಿ 10 ವರ್ಷಗಳ ವಿಳಂಬಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎ. ನೆಲ್ಲಿಕುನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಜಿಲ್ಲೆಯ ಆರೋಗ್ಯ ಕ್ಷೇತ್ರದ ನಿರಂತರ ನಿರ್ಲಕ್ಷ್ಯವನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.


ಹತ್ತು ವರ್ಷ ಕಳೆದರೂ ಅಪೂರ್ಣ: 

ಎನ್.ಎ. ನೆಲ್ಲಿಕುನ್ನು ಅವರ ಮೊದಲ ಶಾಸಕ ಅವಧಿಯಲ್ಲಿ, ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನವೆಂಬರ್ 2013 ರಲ್ಲಿ ವೈದ್ಯಕೀಯ ಕಾಲೇಜಿನ ಅಡಿಪಾಯ ಹಾಕಿದ್ದರು. ಆದರೆ, ಎಲ್‍ಡಿಎಫ್ ಸರ್ಕಾರ ಅಧಿಕಾರದಲ್ಲಿದ್ದು 10 ವರ್ಷಗಳ ನಂತರವೂ ಆಸ್ಪತ್ರೆ ಬ್ಲಾಕ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದರು. ಪ್ರಸ್ತುತ, ಕ್ಲಿನಿಕ್‍ನಂತೆ ಅಲ್ಲಿ ಒಪಿ ಸಮಾಲೋಚನೆಗಳನ್ನು ಮಾತ್ರ ನಡೆಸಲಾಗುತ್ತಿದೆ. ವೈದ್ಯಕೀಯ ಕಾಲೇಜಿನಿಂದ ಜನರು ನಿರೀಕ್ಷಿಸುವ ಯಾವುದೇ ಸೇವೆಗಳು ಲಭಿಸುತ್ತಿಲ್ಲ. 

ವಿದ್ಯಾರ್ಥಿಗಳಿಗೆ ಕಷ್ಟ ಕೋಟಲೆ: 

ಪ್ರಸ್ತುತ, ಈ ಶೈಕ್ಷಣಿಕ ವರ್ಷದಲ್ಲಿ 50 ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ. ಅಗತ್ಯ ಸೌಲಭ್ಯಗಳ ಕೊರತೆಯ ಬಗ್ಗೆ ಈ ವಿದ್ಯಾರ್ಥಿಗಳು ಪ್ರತಿದಿನ ಕರೆ ಮಾಡಿ ದೂರು ನೀಡುತ್ತಿದ್ದಾರೆ ಎಂದು ಶಾಸಕರು ಗಮನಸೆಳೆದರು. ಇದು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಭವಿಷ್ಯದ ಬಗ್ಗೆ ಕಳವಳಕಾರಿಯಾಗಿದೆ. ವಿಧಾನಸಭೆಯ ಒಳಗೆ ಮತ್ತು ಹೊರಗೆ ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪಿಸಿದರೂ, ಪ್ರತಿಕ್ರಿಯೆಗಳು ಮಾತ್ರ ದೊರೆತಿವೆಯೇ ಹೊರತು ಯಾವುದೇ ಪ್ರಾಯೋಗಿಕ ಬದಲಾವಣೆಗಳಿಲ್ಲ ಎಂದು ಅವರು ಆರೋಪಿಸಿದರು.

ಕಾನೂನು ತೊಡಕುಗಳು:

ನಿರ್ಮಾಣ ಗುತ್ತಿಗೆದಾರರಾದ ಈರೋಡ್ ಮೂಲದ ಆರ್‍ಆರ್ ತುಳಸಿ ಬಿಲ್ಡರ್ಸ್‍ಗೆ ಸರ್ಕಾರವು 6 ಕೋಟಿಯಿಂದ 9 ಕೋಟಿ ರೂ.ಗಳ ಬಾಕಿ ಹಣವನ್ನು ಪಾವತಿಸದ ಕಾರಣ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಹಣದ ಕೊರತೆಯಿಂದಾಗಿ ಸರ್ಕಾರವು ಬಾಕಿ ಹಣವನ್ನು ಪಾವತಿಸಲು ಸಿದ್ಧವಿಲ್ಲದ ಕಾರಣ ಗುತ್ತಿಗೆದಾರರು 2022 ರಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದರು.ಜೊತೆಗೆ ಕಾಮಗಾರಿಯನ್ನೂ ನಿಲ್ಲಿಸಿದರು. ನಂತರ, ನವೆಂಬರ್ 2025 ರಲ್ಲಿ ಬಾಕಿ ಹಣವನ್ನು ಪಾವತಿಸಲು ಒಪ್ಪಂದಕ್ಕೆ ಬರಲಾಯಿತು, ಆದರೆ ಬಡ್ಡಿಯ ವಿವಾದ ಇನ್ನೂ ಮುಂದುವರೆದಿದೆ. ಪ್ರಸ್ತುತ, ಉಳಿದ ಕೆಲಸವನ್ನು ಯುಎಲ್‍ಸಿಸಿಎಸ್ ಮೂಲಕ ಮಾಡಲಾಗುತ್ತಿದೆ.

ಆರೋಗ್ಯ ಕ್ಷೇತ್ರದಲ್ಲಿ ನಿರ್ಲಕ್ಷ್ಯ:

ಈ ಅರ್ಜಿಯು ವೈದ್ಯಕೀಯ ಕಾಲೇಜು ಮಾತ್ರವಲ್ಲದೆ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳ ದುಃಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ ಸ್ತ್ರೀರೋಗತಜ್ಞರ ಹುದ್ದೆಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ಬ್ಲಾಕ್‍ಗಳಿದ್ದರೂ ಹೆರಿಗೆ ಪ್ರಕರಣಗಳನ್ನು ಸ್ವೀಕರಿಸದಿರುವುದು ಗಂಭೀರ ನ್ಯೂನತೆಗಳಾಗಿವೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಶೇ. 70 ರಷ್ಟು ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತವೆ. ಹೊಸ ಹುದ್ದೆಗಳನ್ನು ರಚಿಸಿದರೂ ವೈದ್ಯರು ಮತ್ತು ದಾದಿಯರ ಕೊರತೆಯನ್ನು ಪರಿಹರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries