ಕಾಸರಗೋಡು: ಐದು ವರ್ಷದ ಹಿಂದೆ ಮಧೂರು ಸನಿಹದ ಮಾಯಿಪ್ಪಾಡಿ ನಿವಾಸಿ ಕೆ.ಕುಞËಲಿ ಎಂಬವರ ಪುತ್ರ ಅಬ್ದುಲ್ ಸಲಾಂ(41)ನನ್ನು ಕಾಸರಗೋಡು ಪೊಲೀಸರು ರಾಜಸ್ಥಾನದಿಂದಪತ್ತೆಹಚ್ಚಿದ್ದಾರೆ. ಅಬ್ದುಲ್ ಸಲಾಂ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಐದು ವರ್ಷದ ಹಿಂದೆ ಪೊಲೀಸರಿಗೆ ದೂರು ನೀಡಿದ್ದು, ಈ ಸಂದರ್ಭ ಅಬ್ದುಲ್ ಸಲಾಂ ಕೆಲವೊಂದು ಮಾನಸಿಕ ಅಸೌಖ್ಯದಿಂದ ಬಳಲುತ್ತಿರುವುದಾಗಿಯೂ ತಿಳಿಸಿದ್ದರು. ನಂತರ ವಿವಿಧೆಡೆ ಹುಡುಕಾಡಿದರೂ, ಈತನ ಬಗ್ಗೆ ಮಾಹಿತಿ ಲಭಿಸಿರಲಿಲ್ಲ.
ಈ ಮಧ್ಯೆ ಅಬ್ದುಲ್ ಸಲಾಂನನ್ನು ಯಾರೋ ರಾಜಸ್ಥಾನದ ಆಶ್ರಮವೊಂದಕ್ಕೆ ಸೇರ್ಪಡೆಗೊಳಿಸಿದ್ದರು. ಅಲ್ಲಿ ಅಬ್ದುಲ್ ಸಲಾಂ ಕಾಸರಗೋಡು, ಕೂಡ್ಲು ಹೆಸರನ್ನು ಪದೇಪದೆ ಹೇಳುತ್ತಿರುವುದನ್ನು ಆಲಿಸಿದ ನೌಕಾಪಡೆ ಸಿಬ್ಬಂದಿಯೊಬ್ಬರು ಈ ಮಾಹಿತಿಯನ್ನು ಆತನ ಫೋಟೋದೊಂದಿಗೆ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದರು.
ಕಾಸರಗೋಡು ನಗರ ಠಾಣೆ ಇನ್ಸ್ಪೆಕ್ಟರ್ ನಳಿನಾಕ್ಷನ್ ನಿರ್ದೇಶನದನ್ವಯ ಪೊಲೀಸರು ರಾಜಸ್ಥಾನದ ಆಶ್ರಮಕ್ಕೆ ತೆರಳಿ ಅಬ್ದುಲ್ ಸಲಾಂನನ್ನು ಕಾಸರಗೋಡಿಗೆ ಕರೆತಂದು ಮನೆಯವರಿಗೆ ಹಸ್ತಾಂತರಿಸಿದ್ದಾರೆ.

